ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಒಳಪಡುವ ಕಾಲೇಜುಗಳಲ್ಲಿ 2010ರಲ್ಲಿ ಜೂನ್/ಜುಲೈ ತಿಂಗಳಿನಲ್ಲಿ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಸರ್ಕಾರವು ಸಮಿತಿ ರಚಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ವಿಶ್ವವಿದ್ಯಾಲಯ ಅರ್ಜಿ ಸಲ್ಲಿಸಿದೆ.
ನಾಲ್ಕು ಮಂದಿಯ ಸಮಿತಿಯನ್ನು ರಚನೆ ಮಾಡಿರುವುದನ್ನು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಈ ಸಮಿತಿಯು ತನಿಖೆಯನ್ನು ಮುಂದುವರಿಸದಂತೆ ಆದೇಶಿಸಬೇಕು ಎನ್ನವುದು ಅರ್ಜಿದಾರರ ಮನವಿ.
‘ಸಮಿತಿ ನಡೆಸುತ್ತಿರುವ ತನಿಖೆಗೆ ತಡೆ ನೀಡಲು ಈ ಹಂತದಲ್ಲಿ ಸಾಧ್ಯವಿಲ್ಲ. ತನಿಖೆ ಮುಂದುವರಿಯಲಿ’ ಎಂದು ತಿಳಿಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು, ವಿವಾದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಗೆ ನೋಟಿಸ್ ಜಾರಿಗೆ ಮಂಗಳವಾರ ಆದೇಶಿಸಿದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಅವರು ಸೂಚಿಸಿದರು.
ವಿಶ್ವವಿದ್ಯಾಲಯ ಕಾಯ್ದೆಯ 9ನೇ ಕಲಮಿನ ಪ್ರಕಾರ, ಈ ರೀತಿ ಸಮಿತಿ ರಚನೆ ಮಾಡುವ ಪೂರ್ವದಲ್ಲಿ ವಿವಿಗೆ ಷೋಕಾಸ್ ನೋಟಿಸ್ ಜಾರಿ ಮಾಡಬೇಕು. ಆದರೆ ಈ ನಿಯಮ ಗಾಳಿಗೆ ತೂರಲಾಗಿದೆ ಎನ್ನುವುದು ಅರ್ಜಿದಾರರ ದೂರು.
ಕಳೆದ ಜ.28ರಂದು ರಚನೆಗೊಂಡಿರುವ ಈ ಸಮಿತಿಯ ನೇತೃತ್ವವನ್ನು ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ವಹಿಸಿಕೊಂಡಿದ್ದಾರೆ. ಇತರ ಸದಸ್ಯರ ಪೈಕಿ ವಿವಿಯ ಕುಲಪತಿ ಸ್ಥಾನ ಕೈತಪ್ಪಿ ಹೋಗಿರುವ ಎಂ.ಎಸ್.ಶಿವಕುಮಾರ್ ಅವರೂ ಒಬ್ಬರು. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ದುರುದ್ದೇಶಪೂರ್ವಕವಾಗಿ ರಚನೆ ಮಾಡಲಾಗಿದೆ ಎನ್ನುವುದು ಅವರ ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.