ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ವಿವಿಧ ಹುದ್ದೆಗಳಿಗೆ ಪ್ರಸ್ತುತ ನಡೆಯುತ್ತಿರುವ ಸಂದರ್ಶನವನ್ನು 7 ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ಹೈದರಾಬಾದ್ ಕರ್ನಾಟಕಕ್ಕೆ 371 (ಜೆ) ಜಾರಿಗೊಳಿಸುವ ಹಿನ್ನೆಲೆಯಲ್ಲಿ 7ದಿನಗಳ ಕಾಲ ಸಂದರ್ಶನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ಈ ವಿಷಯವನ್ನು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಬುಧವಾರ ವಿಧಾನಪರಿಷತ್ನಲ್ಲಿ ತಿಳಿಸಿದರು.
ಕುಲಪತಿ ವಿರುದ್ಧ ಅನೇಕ ಆರೋಪಗಳಿದ್ದರೂ ಒಂದು ವರ್ಷದ ಅವಧಿಗೆ ಮುಂದುವರಿಸಲಾಗಿದೆ ಮತ್ತು ಪ್ರಸ್ತುತ ಇದೇ ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಸಂದರ್ಶನಗಳಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಿ ಸದಸ್ಯರಾದ ಬಸವರಾಜ ಹೊರಟ್ಟಿ, ಡಾ.ಎ.ಎಚ್. ಶಿವಯೋಗಿಸ್ವಾಮಿ, ಮರಿತಿಬ್ಬೇಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಮರನಾಥ್ ಪಾಟೀಲ್, ವೈ.ಎ. ನಾರಾಯಣಸ್ವಾಮಿ, ಪ್ರೊ. ಕೃಷ್ಣಭಟ್, ಅರುಣ್ ಶಹಾಪುರ, ಪುಟ್ಟಣ್ಣ, ಡಿ.ಎಸ್. ವೀರಯ್ಯ ಮಂಡಿಸಿದ್ದ ಗಮನ ಸೆಳೆಯುವ ಸೂಚನೆಗೆ ಸಚಿವರು ಈ ಉತ್ತರ ನೀಡಿದರು.
30 ಪ್ರಾಧ್ಯಾಪಕರು, 42 ಸಹ ಪ್ರಾಧ್ಯಾಪಕರು ಹಾಗೂ 86 ಉಪನ್ಯಾಸಕರು ಸೇರಿದಂತೆ ಒಟ್ಟು 168 ಹುದ್ದೆಗಳ ನೇಮಕಾತಿಗಾಗಿ 2012ರ ಜುಲೈ 11ರಂದು ಸರ್ಕಾರ ಅನುಮತಿ ನೀಡಿದೆ. ಸದಸ್ಯರು ಮಾಡಿರುವ ಗಂಭೀರ ಆರೋಪಗಳನ್ನು ಕುಲಾಧಿಪತಿಯ ಗಮನಕ್ಕೆ ತಂದು ಸರ್ಕಾರದಿಂದ ಸಾಧ್ಯವಿರುವ ತನಿಖೆಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.