ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಠ್ಠಲನ ಬಿಡುಗಡೆಗೆ ನೆರವು: ಕಾರಟ್

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ನಕ್ಸಲ್ ನಂಟು ಆರೋಪದಿಂದ ಬಂಧನಕ್ಕೊಳಗಾಗಿರುವ ಮಂಗಳೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿ ವಿಠ್ಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಪ್ಪ ಮಲೆಕುಡಿಯ ಅವರ ಬಿಡುಗಡೆಗೆ ಸಕಲ ನೆರವು ನೀಡುವುದಾಗಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಭರವಸೆ ನೀಡಿದರು.

ವಿಠ್ಠಲ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಪ್ಪ ಮಲೆಕುಡಿಯ ಅವರನ್ನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಭೇಟಿ ಮಾಡಿ ಸುಮಾರು ಅರ್ಧ ತಾಸಿಗೂ ಅಧಿಕ ಕಾಲ ಸಮಾಲೋಚನೆ ನಡೆಸಿದ ಅವರು ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

`ಮಾವೋವಾದಿಗಳ ಜತೆ ನಂಟು ಹೊಂದಿರುವ ಆರೋಪ ಹೊರಿಸಿ ವಿಠ್ಠಲ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಈ ಆಪಾದನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ.

`ವಿಠ್ಠಲ ಅವರ ಸ್ನಾತಕೋತ್ತರ ವಾರ್ಷಿಕ ಪರೀಕ್ಷೆಗಳು ಸೋಮವಾರ ಆರಂಭವಾಗಲಿದ್ದು ಪರೀಕ್ಷೆಗೆ ತೆರಳಲು ತ್ವರಿತಗತಿ ನ್ಯಾಯಾಲಯ ಅನುಮತಿ ನೀಡಿದೆ. ವಿಶ್ವವಿದ್ಯಾಲಯವು ಪರೀಕ್ಷೆ ಬರೆಯಲು ಆತನಿಗೆ ಅವಕಾಶ ಕಲ್ಪಿಸುತ್ತದೆ ಎಂಬ ವಿಶ್ವಾಸವಿದೆ~ ಎಂದರು.

`ವಿಠ್ಠಲನ ನೈತಿಕ ಸ್ಥೈರ್ಯ ಉನ್ನತ ಮಟ್ಟದಲ್ಲಿದೆ. ಆತನ ಬಿಡುಗಡೆಗೆ ಕಾನೂನು ಹೋರಾಟ ನಡೆಸುವ ಜತೆಗೆ, ರಾಜಕೀಯವಾಗಿಯೂ ಜನಾಭಿಪ್ರಾಯ ರೂಪಿಸುತ್ತೇವೆ.

ಇದೇ 28ರಂದು ಸಂಸದರ ನಿಯೋಗವು ರಾಜ್ಯದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಲಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಸಂಸದರು, ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರನ್ನು ಒಳಗೊಂಡ ನಿಯೋಗದಲ್ಲಿ ಬಾಜುಬಾನ್ ರಿಯಾನ್, ಪುಲಿನ್ ಬಾಸ್ಕಿ, ವೃಂದಾ ಕಾರಟ್ ಮೊದಲಾದವರು ಇರುತ್ತಾರೆ~ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, `ರಾಷ್ಟ್ರಪತಿ ಹುದ್ದೆಗೆ ಆಡಳಿತ ಪಕ್ಷ ಯಾರ ಹೆಸರನ್ನು ಪ್ರಸ್ತಾಪಿಸುತ್ತದೆ ಎಂಬುದನ್ನು ನೋಡಿಕೊಂಡು ಪಕ್ಷವು ನಿರ್ಧಾರ ತಳೆಯಲಿದೆ~ ಎಂದರು. ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ, ಸಿಪಿಎಂ ಮುಖಂಡ ಬಿ.ಮಾಧವ ಜತೆಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT