ಗೌರಿಬಿದನೂರು: ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ನಿರ್ಮಿಸಲಾದ ಶೌಚಾಲಯಗಳ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಫಲಾನುಭವಿಗಳು ತಾಲ್ಲೂಕಿನ ಹಿರೇಬಿದನೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ನಾರಾಯಣ ರೆಡ್ಡಿ ಮಾತನಾಡಿ, `ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ಫಲಾನುಭವಿಗಳು ವೈಯಕ್ತಿಕವಾಗಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಸರ್ಕಾರದಿಂದ ಪ್ರೋತ್ಸಾಹಧನ ಬಿಡುಗಡೆಗೊಂಡು ಒಂಬತ್ತು ತಿಂಗಳು ಕಳೆದಿವೆ. ಆದರೆ ಈವರೆಗೆ ಫಲಾನುಭವಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಿಲ್ಲ. ಪ್ರೋತ್ಸಾಹ ಧನ ವಿತರಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ~ ಎಂದು ಆರೋಪಿಸಿದರು.
ಮುಖಂಡರಾದ ಸವಿತಾ ನಟೇಶ್, `ಬಡತನ ರೇಖೆಗಿಂತ ಕೆಳಗಿರುವ ಅರ್ಹ ಫಲಾನುಭವಿಗಳು ವೈಯಕ್ತಿಕವಾಗಿ ಶೌಚಾಲಯ ನಿರ್ಮಿಸಿಕೊಂಡಿದ್ದು, 160 ಮಂದಿ ಅರ್ಹರ ಪಟ್ಟಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಆದರೆ ಪಟ್ಟಿಗೆ ಅನುಸಾರವಾಗಿ ಅರ್ಹರಿಗೆ ಪ್ರೋತ್ಸಾಹ ಧನ ವಿತರಿಸುತ್ತಿಲ್ಲ. ಪ್ರೋತ್ಸಾಹ ಧನ ವಿತರಣೆಯಾಗುವವರೆಗೆ ಪ್ರತಿಭಟನೆ ನಡೆಸಲಾಗುವುದು~ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಹಿರೇಬಿದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಖಯೂಂಖಾನ್, `ಫಲಾನುಭವಿಗಳ ಅಂತಿಮ ಪಟ್ಟಿಯನ್ನು ತಯಾರಿಸಿ ಮೇ 14ರಂದು ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಗುವುದು. ಅದರ ಬಳಿಕವೇ ಪ್ರೋತ್ಸಾಹ ಧನ ವಿತರಿಸಲಾಗುವುದು~ ಎಂದರು.