ವಾಷಿಂಗ್ಟನ್ (ಪಿಟಿಐ): ಯೂರೋಪಿನ ಸಾಲದ ಬಿಕ್ಕಟ್ಟು ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದ ಹೊಸ ಹೂಡಿಕೆಗಳು ನೆನೆಗುದಿಗೆ ಬಿದ್ದಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
ಯೂರೋಪ್ ಬಿಕ್ಕಟ್ಟಿನಿಂದ ಭಾರತದ ರಫ್ತು ವಹಿವಾಟಿಗೆ ಹಿನ್ನಡೆ ಉಂಟಾಗಿದೆ. ಖಾಸಗಿ ಹೂಡಿಕೆಗಳೂ ಕುಂಠಿತಗೊಂಡಿವೆ ಎಂದು`ಐಎಂಎಫ್~ನ ಏಷ್ಯಾ -ಪೆಸಿಫಿಕ್ ವಲಯದ ನಿರ್ದೇಶಕ ಅನೂಪ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ನೀತಿ ನಿರೂಪಕರು ಸಮರ್ಥ ಹಣಕಾಸು ಸೇರ್ಪಡೆಯ ಮೂಲಕ ವಿತ್ತೀಯ ಕೊರತೆ ತಗ್ಗಿಸಲು ಪ್ರಯತ್ನಿಸಬೇಕು. ಮೂಲಸೌಕರ್ಯ ಅಭಿವೃದ್ಧಿ ಮೂಲಕ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಬೇಕು, ಇದರಿಂದ ಸುಸ್ಥಿರ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಮೂಲಸೌಕರ್ಯ ರಂಗದ ಹೂಡಿಕೆ ಹೆಚ್ಚಿಸಲು ಕೆಲವು ಆರ್ಥಿಕ ಸುಧಾರಣೆಗಳನ್ನು ತರುವುದು ಅಗತ್ಯವಾಗಿದೆ. ವಿಶೇಷವಾಗಿ `ಇಂಧನ~ ವಲಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಯ ಅಗತ್ಯವಿದೆ ಎಂದೂ ಸಿಂಗ್ ಸಲಹೆ ನೀಡಿದ್ದಾರೆ.