ಚಿಕ್ಕಜಾಜೂರು: ಜನತಾ ಕಾಲೊನಿಯ ಸದ್ಗುರು ಅಗರಬತ್ತಿ ಮಹಿಳಾ ಸ್ವಸಹಾಯ ಸಂಘಕ್ಕೆ ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನೆಯ ಸಚಿವರು, ಸಂಸದರು, ಉನ್ನತ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು.
ಇಲ್ಲಿನ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯವೈಖರಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಆರ್ಥಿಕ ಸಹಕಾರದ ಬಗ್ಗೆ ಅಧ್ಯಯನ ಮಾಡಿ ನಮ್ಮ ದೇಶದಲ್ಲೂ ಇಂತಹ ಸ್ವಸಹಾಯ ಸಂಘ ಸ್ಥಾಪಿಸುವ ಉದ್ದೇಶ ಸರ್ಕಾರಕ್ಕಿದೆ ಎನ್ಎಸಿಎಸ್ಎ ಕಮಿಷನರ್ ಸೈದು ಕನ್ಫಾನ್ ಸೇಸಾ ತಿಳಿಸಿದರು.
ಸಿಯೆರಾ ಲಿಯೋನೆ ಸಂಸದ ಕೊಂಬೊರ್ ಕಮರ ಮಾತನಾಡಿ, ಭಾರತದ ಹಲವಾರು ಕಡೆಗಳಲ್ಲಿ ಸ್ಥಾಪಿತವಾಗಿರುವ ಮಹಿಳಾ ಸ್ವಸಹಾಯ ಸಂಘದ ಅಡಿಯಲ್ಲಿ ಸ್ಥಾಪಿತವಾಗಿರುವ ಉತ್ಪಾದನಾ ಘಟಕ ಸಂಘಗಳನ್ನು ಈ ಹಿಂದೆ ನಮ್ಮ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳು ಭೇಟಿ ನೀಡಿ ತೃಪ್ತಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇಲ್ಲಿನ ರೀತಿಯಲ್ಲಿ ನಮ್ಮಲ್ಲಿ ಈಗಾಗಲೇ 120 ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗಿದ್ದು, ಈ ಸಂಘಗಳ ಕಾರ್ಯಕ್ರಮ ಹಾಗೂ ಅಭಿವೃದ್ಧಿ ನಮ್ಮ ಸರ್ಕಾರಕ್ಕೆ ತೃಪ್ತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಉತ್ಪಾದನೆ ಆಗುತ್ತಿರುವ ಉತ್ಪನ್ನ ಹಾಗೂ ಅವುಗಳಿಂದ ಕುಟುಂಬದ ಆರ್ಥಿಕ ಸ್ಥಿತಿಯ ಅಭಿವೃದ್ಧಿಗೆ ಪೂರಕವಾಗುವಂತಹ ಯೋಜನೆಗಳು ನಮ್ಮಲ್ಲಿ ಹೆಚ್ಚು ಜನಪ್ರಿಯ ಆಗುತ್ತಿರುವುದರಿಂದ ಭಾರತ ಸರ್ಕಾರದ ಸಹಕಾರದೊಂದಿಗೆ ನಾವು ಇಲ್ಲಿನ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಹಾಗೂ ಸ್ತ್ರೀಶಕ್ತಿ ಸಂಘಗಳ ಮಾದರಿಯನ್ನು ಸ್ಥಾಪಿಸುವ ಉದ್ದೇಶದಿಂದ ಸರ್ಕಾರದ ಪರವಾಗಿ ಅಧ್ಯಯನಕ್ಕೆ ಬಂದಿದ್ದೇವೆ ಎಂದರು.
ಸಿಯೆರಾ ಲಿಯೋನೆ ಹಣಕಾಸು ಸಚಿವ ಅಮದ್ನ್ ಜಾನ್ ಜಾಲ್ಲೊಹ್, ಫ್ರೆಸಿಡೆನ್ಷಿಯಲ್ ಸಲಹೆಗಾರ ಮತ್ತು ನಿರ್ಧೇಶಕ ಫ್ರೋಫೆಸರ್ ವಿಕ್ಟರ್ ಸ್ಟ್ರಸ್ಸೆರಾ ಕಿಂಗ್, ಎನ್ಜಿಒ, ಎಂಎಫ್ಐ ನಿರ್ಧೇಶಕ ಅಲಿಯೆ ಬಿ. ಫೋರೆನ್ ಸಿಯೆರಾ ಲಿಯೋನೆ ಸರ್ಕಾರದ ತಂಡದಲ್ಲಿದ್ದರು.
ಚಿತ್ರದುರ್ಗದ ಸಿಡಾರ್ ಕಾರ್ಯಕ್ರಮಾಧಿಕಾರಿ ವಿಜಯಕುಮಾರ್, ಪ್ರಶಾದ್ಮೂರ್ತಿ, ಹೊಳಲ್ಕೆರೆ ಸಿಡಾರ್ನ ದೇವರಾಜ್, ಶಿವಮೂರ್ತಿ, ಚಿಕ್ಕಜಾಜೂರು ಸಂಪನ್ಮೂಲ ಅಧಿಕಾರಿ ಪ್ರಕಾಶ್, ಚಿಕ್ಕಜಾಜೂರಿನ ಶ್ರೀಸದ್ಗುರು ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳಾದ ಎಚ್. ನೂರ್ಜಹಾನ್, ರೋಷನ್ಬಿ, ರಮೀಜಾ, ಶಾರದಮ್ಮ, ರಮಿಜಾಬಿ, ಫರಿದಾ, ನೂರ್ಜಹಾನ್, ಮುಮತಾಜ್, ಫಾತಿಮಾ, ರಷಿದಾಬೇಗಂ, ಪಾರ್ವತಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.