ತುಮಕೂರು: ಸಹಾಯ ಮಾಡುವ ನೆಪದಲ್ಲಿ ವಿದೇಶಿ ಕಂಪೆನಿಗಳು ಭಾರತದ ಜೈವಿಕ ಸಂಪತ್ತು ಲೂಟಿ ಮಾಡುತ್ತಿವೆ ಎಂದು ತುಮಕೂರು ವಿ.ವಿ ಶೈಕ್ಷಣಿಕ ವಿಭಾಗದ ಉಪ ಕುಲಸಚಿವ ಡಾ.ಎಸ್.ಶ್ರೀನಿವಾಸ್ ವಿಷಾದಿಸಿದರು.
ವಿಜ್ಞಾನ ಬಿಂದು ಸಂಸ್ಥೆಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಗರದ ಸರ್ವೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಜೀವ ಪ್ರಬೇಧಗಳಲ್ಲಿರುವ ಅಮೂಲ್ಯ ರಾಸಾಯನಿಕಗಳನ್ನು ಬೇರ್ಪಡಿಸಿ ವ್ಯಾವಹಾರಿಕವಾಗಿ ಬಳಸಲು ಸಾಧ್ಯವಾಗುತ್ತಿಲ್ಲ. ಲಭ್ಯ ಸಂಪನ್ಮೂಲಗಳ ಬಳಕೆಯಿಂದ ನಮ್ಮಲ್ಲಿ ಹಲವು ಉತ್ತಮ ಸಂಶೋಧನೆಗಳು ನಡೆಯುತ್ತಿವೆ. ಆದರೆ ಭಾರತದ ಸಂಶೋಧನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮರ್ಪಕವಾಗಿ ಬಿಂಬಿತವಾಗುತ್ತಿಲ್ಲ. ಭೌತಿಕ ಸಂಪನ್ಮೂಲಗಳಿಗಿಂತ ವಿಜ್ಞಾನಿಗಳ ಬೌದ್ಧಿಕ ಸಾಮರ್ಥ್ಯಕ್ಕೆ ಹೆಚ್ಚು ಒತ್ತು ಸಿಗಬೇಕು ಎಂದು ಕರೆ ನೀಡಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯ ಈಶ್ವರಯ್ಯ, ಆಚಾರ್ಯ ತಾಂತ್ರಿಕ ಮಹಾ ವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕಿ ಎಚ್.ಜಿ.ಅಹಲ್ಯಾ, ಮುಖ್ಯ ಶಿಕ್ಷಕ ಸದಾಶಿವಯ್ಯ, ವಿಜ್ಞಾನ ಬಿಂದು ಸಂಸ್ಥೆಯ ತ್ರಿವೇಣಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.