ನವದೆಹಲಿ: ವಿದೇಶಿ ಪೈಲಟ್ಗಳಿಗೆ `ವಿದೇಶಿ ವೈಮಾನಿಕ ಸಿಬ್ಬಂದಿ ತಾತ್ಕಾಲಿಕ ಅನುಮತಿ~ (ಎಫ್ಎಟಿಎ) ನೀಡುವ ಮುನ್ನ ಅವರ ಹಿನ್ನೆಲೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಮಂಗಳೂರು ವಿಮಾನ ದುರಂತಕ್ಕೆ ಸಂಬಂಧಿಸಿದ ತನಿಖಾ ವರದಿಯಲ್ಲಿ ಹೇಳಲಾಗಿದೆ.
ವಿಮಾನ ಸುರಕ್ಷೆ ದೃಷ್ಟಿಯಲ್ಲಿ ವಿದೇಶಿ ಪೈಲಟ್ಗಳನ್ನು ನೇಮಕ ಮಾಡುವ ಮುನ್ನ ಅವರ ಆರೋಗ್ಯದ ಮಾಹಿತಿಯನ್ನೂ ಪರಿಶೀಲನೆ ಮಾಡಬೇಕಾಗುತ್ತದೆ. ಅಲ್ಲದೇ ಭಾರತೀಯ ಪೈಲಟ್ಗಳಿಗೆ ನಡೆಸುವಂತೆ ವಿದೇಶಿ ಪೈಲಟ್ಗಳಿಗೂ ಉದ್ಯೋಗ ಪೂರ್ವ ವೈದ್ಯಕೀಯ ತಪಾಸಣೆ ಮಾಡಬೇಕು ಎಂದು ಏರ್ ಮಾರ್ಷಲ್ ಬಿ.ಎನ್. ಗೋಖಲೆ ನೇತೃತ್ವದಲ್ಲಿ ಸಿದ್ಧಪಡಿಸಿರುವ ವರದಿ ತಿಳಿಸಿದೆ.
ಗಾಢ ನಿದ್ದೆಯಿಂದ ಎಚ್ಚೆತ್ತ ಪರಿಣಾಮವಾಗಿ ಕ್ಯಾಪ್ಟನ್ ಗ್ಲುಸಿಕಾ ಅವರಿಗೆ ಸಕಾಲದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳಲು ತೋಚಲಿಲ್ಲ ಎಂದೂ ಅಭಿಪ್ರಾಯಪಟ್ಟಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್, ವಿದೇಶಿ ಪೈಲಟ್ಗಳ ನೇಮಕಾತಿ ನಿಯಮಗಳನ್ನು ಪುನರ್ಪರಿಶೀಲಿಸಬೇಕು. ಅವರು ತಮ್ಮ ಕುಟುಂಬದೊಂದಿಗೆ ಭಾರತದಲ್ಲಿಯೇ ಇರುವಂತೆ ಪ್ರೋತ್ಸಾಹಿಸಬೇಕು (ಈಗಿನ ನಿಮಯದಲ್ಲಿ ವಿದೇಶಿ ಪೈಲಟ್ಗಳು 6 ವಾರ ಕೆಲಸ ಮಾಡಿ 2 ವಾರ ರಜೆಯ ಮೇಲೆ ತಮ್ಮ ದೇಶಕ್ಕೆ ತೆರಳುತ್ತಾರೆ) ಎಂದು ಅದು ಹೇಳಿದೆ.