ಕನಕಪುರ: ಐದು ದಿನಗಳ ಹಿಂದೆ ಮುತ್ತತ್ತಿ ದೋಣಿ ವಿಹಾರದಲ್ಲಿ ಕಣ್ಮರೆಯಾಗಿದ್ದ ವಿದೇಶಿ ಪ್ರವಾಸಿಗರ ಶೋಧಕಾರ್ಯ ಗುರುವಾರ ಮತ್ತಷ್ಟು ತೀವ್ರಗೊಂಡಿತಾದರೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಮುತ್ತತ್ತಿ ಕಾವೇರಿ ನದಿಯಲ್ಲಿ ಶೋಧ ಕಾರ್ಯಾಚರಣೆ ಮುಗಿಸಿರುವ ಅರೆಸೇನಾ ಪಡೆಯ ತನಿಖಾ ತಂಡ ಗುರುವಾರ ಸಂಗಮ್ ಮತ್ತು ಮೇಕೆದಾಟಿನಲ್ಲಿ ಹುಡುಕಾಟ ನಡೆಸಿತು.
ನುರಿತ ಈಜುಪಟುಗಳು ಮುತ್ತತ್ತಿ ಕಾವೇರಿ ನದಿಯಿಂದ ಶೋಧ ಆರಂಭಿಸಿದ್ದು ಸಂಗಮ್ ಮೂಲಕ ಮೇಕೆದಾಟು ಪ್ರದೇಶದಲ್ಲಿ ಶೋಧ ಮುಂದುವರೆಸಿದ್ದಾರೆ. ಈ ವೇಳೆ ಪೋಲೆಂಡ್ನ ಟೂರ್ಟನ್ ಐಯಾನ್ ರಿಚರ್ಡ್ ಮತ್ತು ಯುರೋಪ್ನ ಮೈಕೆಲ್ ಡೇವಿಡ್ ಜಾನ್ ಈಸ್ಟನ್ ದೋಣಿ ವಿಹಾರಕ್ಕೆ ಬಳಸಿದ್ದ ದೋಣಿ ಮತ್ತು ಒಂದು ಮೊಬೈಲ್ ಪತ್ತೆಯಾಗಿದೆ.
ಶೋಧ ಕಾರ್ಯವು ಮುಂದುವರಿದಿದ್ದು ಅಧಿಕಾರಿಗಳ ಸ್ಥಳದಲ್ಲೇ ಬಿಡಾರ ಹೂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಎ.ಎಸ್ಪಿ ಶಂತನು ಸಿನ್ಹಾ, ಮಂಡ್ಯ ಜಿಲ್ಲಾ ಡಿವೈಎಸ್ಪಿ ಮುತ್ತಪ್ಪ ತನಿಖಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.