ಬೆಂಗಳೂರು: ಆನೇಕಲ್ನ ಜ್ಞಾನಜ್ಯೋತಿ ಸಂಸ್ಥೆಗೆ ಬಂದಿದ್ದ ಇಬ್ಬರು ವಿದೇಶಿ ವಿದ್ಯಾರ್ಥಿನಿಯರನ್ನು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜರ್ಮನಿಯ ವಿದ್ಯಾರ್ಥಿನಿ ಹಾಗೂ ಮತ್ತೊಂದು ದೇಶದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದ್ದು, ಅವರಿಬ್ಬರೂ ಅಧ್ಯಯನ ಉದ್ದೇಶದ ಭೇಟಿಗಾಗಿ ಒಂದು ತಿಂಗಳಿನಿಂದ ಜ್ಞಾನಜ್ಯೋತಿ ಸಂಸ್ಥೆಯಲ್ಲಿ ಉಳಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 24ರ ಸಂಜೆ ಅವರಿಬ್ಬರೂ ಸಂಸ್ಥೆಯ ಸಮೀಪವೇ ವಾಯುವಿಹಾರಕ್ಕೆ ಹೋಗಿದ್ದಾಗ ನಾಲ್ವರು ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದರು. ನಂತರ ಅವರನ್ನು ಲಕ್ಷ್ಮೀಪುರ ಎಂಬ ಗ್ರಾಮದ ಬಳಿಯ ನೀಲಗಿರಿ ತೋಪಿಗೆ ಎಳೆದೊಯ್ದ ಕಿಡಿಗೇಡಿಗಳು ಅವರಿಬ್ಬರ ಮೇಲೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಂಧನ: ಪ್ರಕರಣ ಸಂಬಂಧ ಗೌರೇನಹಳ್ಳಿಯ ಏಜಾಜ್ ಅಹಮ್ಮದ್, ಇಮ್ರಾನ್ ಪಾಷಾ, ಅರೇನಹಳ್ಳಿಯ ನಾರಾಯಣಸ್ವಾಮಿ ಮತ್ತು ಮೋಹನ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಧ್ಯಯನ ಭೇಟಿಗಾಗಿ ಬಂದಿದ್ದ ಆ ವಿದ್ಯಾರ್ಥಿನಿಯರು ಆನೇಕಲ್ನ ಅಕ್ಕಪಕ್ಕದ ಹಳ್ಳಿಗಳಿಗೆ ತೆರಳಿ ಸಮಾಜ ಸೇವೆ ಮಾಡುತ್ತಿದ್ದರು. ಅತ್ಯಾಚಾರ ಘಟನೆಯ ನಂತರ ಅವರು ತಮ್ಮ ದೇಶಗಳಿಗೆ ಹಿಂದಿರುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.