ಉಡುಪಿ: ವಿದ್ಯಾರ್ಜನೆ ಜೊತೆ ಯಕ್ಷಗಾನ ಕಲಿಕೆ ಅಳವಡಿಸಿಕೊಂಡರೆ ಯಕ್ಷಗಾನ ಕಲೆ ಉಳಿಯುತ್ತದೆ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಹೇಳಿದರು.
ನವದೆಹಲಿ ಸಂಸ್ಕೃತಿ ಇಲಾಖೆ, ಮಣಿಪಾಲ ಭಾರತೀಯ ವಿದ್ಯಾಭವನ ಉಡುಪಿ ಇಂದ್ರಾಳಿಯ ಶಿವಪ್ರಭಾ ಯಕ್ಷಗಾನ ಕಲಾಕೇಂದ್ರದಲ್ಲಿ ಭಾನು ವಾರ ಏರ್ಪಡಿಸಿದ್ದ ಅಂತರಾಜ್ಯ ಸಾಂಸ್ಕೃತಿಕ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಚಿತ ಶಿಕ್ಷಣ,ವಿದ್ಯಾರ್ಥಿ ವೇತನ ನೀಡಿದರೂ ಯಕ್ಷಗಾನ ಕಲಿಕೆಗೆ ಜನ ಬರುತ್ತಿಲ್ಲ, ಕಲೆ ಜೀವನ ವೃತ್ತಿಯಾಗಿರುವುದೆ ಇದಕ್ಕೆ ಕಾರಣ ಎಂದರು.ಬದುಕಿಗೆ ವೃತ್ತಿ ಅವಲಂಭಿಸಿ, ಪ್ರವೃತ್ತಿಯಾಗಿ ಕಲೆ ಸ್ವೀಕರಿಸಿದರೆ ಯಕ್ಷಗಾನ ಕಲೆ ಉಳಿಯುತ್ತದೆ ಎಂದು ಅವರು ಹೇಳಿದರು.
ಚಿತ್ರ ಕಲಾವಿದರೂ ಮತ್ತು ಯಕ್ಷಗಾನದ ಒಟ್ಟೊಟ್ಟಿಗೆ ಹೆಜ್ಜೆ ಹಾಕುವುದರಿಂದ ಯಕ್ಷಗಾನ ಪಾತ್ರದ ವರ್ಣ ದೋಷ ಪರಿಹರಿಸಲು ಸಾಧ್ಯ. ಲಲಿತ ಕಲಾ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿ ಕೊಡು ಕೊಳ್ಳುವ ಮೂಲಕ ಕಲೆಗೊಂದು ನೆಲೆ ಕೊಡಲು ಸಾಧ್ಯ ಎಂದರು.
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತರಾಮ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು. ದಾನಿ ರಾಘವೇಂದ್ರ ಕಿಣಿ ನೀಡಿದ ಸಮವಸ್ತ್ರಗಳನ್ನು ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಯು.ದುಗ್ಗಪ್ಪ ಮಲ್ಪೆ ಮತ್ತು ಲಲಿತ ಕಲಾ ಅಕಾಡೆಮಿ ಸದಸ್ಯರಾದ ಪುರುಷೋತ್ತಮ ಅಡ್ವೆ ಅವರನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಕೇಂದ್ರ ಕಾರ್ಯದರ್ಶಿ ಪ್ರೊ.ಹೆರಂಜೆ ಕೃಷ್ಣ ಭಟ್ಸ್ವಾಗತಿಸಿದರು. ಪ್ರಸಾದ್ ಕುಮಾರ್ ಮೊಗೆಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ನಿಯರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ, ವಿದ್ಯಾರ್ಥಿಗಳಿಂದ ತಾಳಮದ್ದಲೆ, ಮಾದಿರ ಜಾನಪದ ನೃತ್ಯ ಮತ್ತು ಕಾಸರಗೋಡು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆ ಯಾಟ ಸಂಘ ದಿಂದ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ನಡೆಯಿತು.