ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಕೈಯಲ್ಲಿ ಅರಳಿದ ನಾಯಕರು

Last Updated 22 ಅಕ್ಟೋಬರ್ 2011, 11:15 IST
ಅಕ್ಷರ ಗಾತ್ರ

ಕಾರವಾರ: ಕಳೆದವಾರ ತಾಲ್ಲೂಕಿನ ಚಿತ್ತಾಕುಲದ ಶಿವಾಜಿ ಪದವಿಪೂರ್ವ ಕಾಲೇಜಿನ ಪ್ರತಿಭೆಗಳ ಅನಾವರಣ ಆಯಿತು. ವಿದ್ಯಾರ್ಥಿಗಳ ಕಲಾ ಪ್ರತಿಭೆಗಳಿಗೆ ಮನಸೋಲದವರೇ ಇರಲಿಲ್ಲ. ಅಷ್ಟೊಂದು ಅದ್ಭುತವಾಗಿದ್ದ ಆ ರಂಗೋಲಿ ನೋಡುಗರನ್ನು ಸೆಳೆದುಕೊಂಡಿತು.

ವರ್ಷಂಪ್ರತಿ ಶಿವಾಜಿ ಪ್ರೌಢಶಾಲೆಯಲ್ಲಿ ರಂಗೋಲಿ ಹಾಕುವ ಸ್ಪರ್ಧೆ ನಡೆಯುತ್ತದೆ. ಆದರೆ, ಈ ಬಾರಿ ತುಸು ಹೆಚ್ಚಿನ ಉತ್ಸಾಹದಿಂದಲೇ ಪ್ರಾಚಾರ್ಯ ಪಿ.ಕೆ.ಚಾಪಗಾಂವಕರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾಲೇಜಿನ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿ ಎಂದು ಸ್ಥಳೀಯ ಕಲಾವಿದರಿಗೂ ರಂಗೋಲಿ ಹಾಕಲು ಅವಕಾಶ ನೀಡಿದ್ದರು.

ಚಿತ್ರನಟರ, ರಾಜಕೀಯ ನಾಯಕರ, ಸಾಮಾಜಿಕ ಕಾರ್ಯಕರ್ತರ, ಧರ್ಮಗುರುಗಳ, ಪೊಲೀಸ್ ಅಧಿಕಾರಿಗಳ ಭಾವಚಿತ್ರಗಳನ್ನು ನೆಲದಮೇಲೆ ರಂಗೋಲಿಯಲ್ಲಿ ಸೆರೆ ಹಿಡಿಯಲಾಗಿತ್ತು. ಈ ಕಲೆ ಪ್ರೇಕ್ಷಕರು ಅಬ್ಬಾ ಎಂದು ಹುಬ್ಬೇರಿಸುವಂತೆ ಮಾಡಿತು. ಎಲ್ಲರೂ ವಿದ್ಯಾರ್ಥಿಗಳ ಕಲಾ ಪ್ರತಿಭೆಗೆ ಶಹಭಾಸ್‌ಗಿರಿ ನೀಡಿದರು.

ಚಿತ್ರನಟ ಅಜೇಯ ದೇವಗನ್, ಹೃತಿಕ್ ರೋಶನ್, ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ ಗುರೂಜಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನಿವೃತ್ತ ಐಪಿಎಸ್ ಅಧಿಕಾರಿ ಕಿರಣ ಬೇಡಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಯೋಗಗುರು ಬಾಬಾ ರಾಮದೇವ್ ಅವರ ಭಾವಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿತ್ತು.

ರಂಗೋಲಿಗಳು ಒಂದನ್ನೊಂದು ಮೀರಿಸುವಂತಿದ್ದವು. ರಂಗೋಲಿಗಳಲ್ಲಿ ಕೊಂಕು ಹುಡುಕುವಂತಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ರಂಗೋಲಿಗಳು ಮೂಡಿಬಂದಿದ್ದವು. ಶಿವಾಜಿ ಕಾಲೇಜಿನ ವಿದ್ಯಾರ್ಥಿಗಳ ಕಲಾಶ್ರೀಮಂತಿಕೆಗೆ ಮರುಳಾಗದವರೇ ಇರಲಿಲ್ಲ.

ಸತತ ನಾಲ್ಕೈದು ಗಂಟೆಗಳ ಕಾಲ ಶ್ರಮಪಟ್ಟು ವಿದ್ಯಾರ್ಥಿಗಳು ಈ ರಂಗೋಲಿಗಳನ್ನು ಹಾಕಿದ್ದರು. ತಮ್ಮ ಸಹಪಾಠಿಗಳ ಕಲೆಗಳನ್ನು ನೋಡಿ ಇತರೆ ವಿದ್ಯಾರ್ಥಿಗಳು ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT