ದೇವನಹಳ್ಳಿ: ತಾಲ್ಲೂಕಿನ ವಿದ್ಯಾರ್ಥಿ ನಿಯಗಳಿಗೆ ದಾಖಲಾತಿ ಮಾಡಿಕೊಳ್ಳುವ ಸಂಬಂಧ ಇಲ್ಲಿನ ಗುರುಭವನದಲ್ಲಿ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಕಳೆದ 10 ವರ್ಷಗಳಿಂದ ನಿಲಯಗಳಲ್ಲಿ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. 10 ರಿಂದ 20 ವಿದ್ಯಾರ್ಥಿಗಳು ಮಾತ್ರ ಸೌಲಭ್ಯ ಪಡೆಯುತ್ತಿದ್ದು, ರಾಜ್ಯ ಮತ್ತ ಕೇಂದ್ರ ಸರ್ಕಾರದ ಅನುದಾನ ಹಿಂತಿರುಗುತ್ತಿದೆ ಎಂದರು. ತಾಲ್ಲೂಕಿನಲ್ಲಿ 215 ಪ್ರಾಥಮಿಕ ಶಾಲೆಗಳಿದ್ದು, 1 ಶಾಲೆಗೆ 4 ಮಕ್ಕಳನ್ನು ಮನವೊಲಿಸಿ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಬೇಕು.
ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ, ಹಾಸಿಗೆ, ಹೊದಿಕೆ ಮತ್ತು ವಿಶೇಷ ಬೋಧನೆ ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ವ್ಯವಸ್ಥೆಗೆ ತಾಲ್ಲೂಕು ಪಂಚಾಯಿತಿಯಿಂದ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. 60 ಲಕ್ಷ ರೂಪಾಯಿಯನ್ನು ಶಾಲಾ ಕಟ್ಟಡ ದುರಸ್ತಿಗೆ, ಕುಡಿಯುವ ನೀರು, ಕಾಂಪೌಂಡ್ ನಿರ್ಮಾಣ ಹಾಗೂ ಶೌಚಾಲಯ ನಿರ್ಮಾಣಕ್ಕೂ ನೀಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರು ಸ್ಥಳೀಯ ಪ್ರಮುಖರನ್ನು, ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಪ್ರವೃತ್ತರಾಗಬೇಕು.
2012 ರ ಶೈಕ್ಷಣಿಕ ಸಾಲಿಗೆ ಪ್ರವೇಶ ಕಲ್ಪಿಸಲು ಪ್ರತಿ ಮನೆಗೆ ಭೇಟಿ ನೀಡಿ ಸರ್ಕಾರದ ಸವಲತ್ತುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು. ತಾಲ್ಲೂಕಿನಲ್ಲಿ 5 ಪರಿಶಿಷ್ಟ ಜಾತಿ ಬಾಲಕರ , 2 ಪರಿಶಿಷ್ಟ ಜಾತಿ ಬಾಲಕಿಯರ, 1 ಪರಿಶಿಷ್ಟ ಪಂಗಡ ಬಾಲಕರ, 1 ಹಿಂದುಳಿದ ವರ್ಗಗಳ, 1 ಮೊರಾರ್ಜಿ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸಮಾಜ ಕಲ್ಯಾಣಾಧಿಕಾರಿ ರಾಜಣ್ಣ, ಶಿಕ್ಷಣ ಸಂಯೋಜಕ ರವಿಪ್ರಕಾಶ್, ಪ್ರಭು ಸ್ವಾಮಿ, ಬಿಸಿಎಂ ವಿದ್ಯಾರ್ಥಿ ನಿಲಯ ವಿಸ್ತರಣಾಧಿಕಾರಿ ಶಂಕರನಾರಾಯಣ ಮತ್ತಿತರರು ಇದ್ದರು.