ಹೈದರಾಬಾದ್(ಪಿಟಿಐ): ತೆಲಂಗಾಣ ರಾಜ್ಯ ರಚನೆ ವಿವಾದ ಉಸ್ಮಾನಿಯ ವಿಶ್ವವಿದ್ಯಾಲಯ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು. ರಾಲಿ ನಡೆಸಲು ಯತ್ನಿಸಿದ ವಿದ್ಯಾರ್ಥಿಗಳು ಪೊಲೀಸರ ಜತೆ ಸಂಘರ್ಷಕ್ಕೆ ಇಳಿದರು. ಈ ವೇಳೆ ಪೊಲೀಸರು ಅಶ್ರುವಾಯು ಸಿಡಿಸಿದರು.
ರಾಯಲ ಸೀಮಾಂಧ್ರ ಭಾಗದ ಸರ್ಕಾರಿ ಅಧಿಕಾರಿಗಳು ಸಭೆ ಸೇರಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣಕ್ಕೆ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ತೆರಳಿ ಮುತ್ತಿಗೆ ಹಾಕಿ ಸಭೆ ಅಂತ್ಯಗೊಳಿಸಲು ಯತ್ನಿಸಿದಾಗ ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು. ವಿದ್ಯಾರ್ಥಿಗಳು `ಜೈ ತೆಲಂಗಾಣ' ಎಂದು ಘೋಷಣೆ ಕೂಗುತ್ತಾ ಬ್ಯಾರಿಕೇಡ್ ತಳ್ಳಿ, ಪೊಲೀಸರತ್ತ ಕಲ್ಲು ತೂರಿದಾಗ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು.
ಈ ವೇಳೆ ಹಲವು ವಿದ್ಯಾರ್ಥಿಗಳನ್ನು ಬಂಧಿಸಲಾಯಿತು. ರ್ಯಾಲಿ ನಡೆಸಲು ವಿದ್ಯಾರ್ಥಿಗಳು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಶಾಂತಿಯುತ ರಾಲಿ ನಡೆಸಲು ಉಸ್ಮಾನಿಯಾ ವಿವಿ ಜಂಟಿ ಕ್ರಿಯಾ ಸಮಿತಿ ಈ ಹಿಂದೆ ಅನುಮತಿ ಕೇಳಿತ್ತು. ಆದರೆ ಪೊಲೀಸರು ಅದಕ್ಕೆ ನಿರಾಕರಿಸಿದ್ದರು. ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಒತ್ತಾಯಿಸಿ `ತೆಲಂಗಾಣ ಬಂದ್'ಗೆಕ್ರಿಯಾ ಸಮಿತಿ ಕರೆ ನೀಡಿತ್ತು.
ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಕಲ್ಲುತೂರಾಟದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ನಿಜಾಂ ಕಾಲೇಜು ಹಾಸ್ಟೆಲ್ ಹಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.