ಕೃಷ್ಣರಾಜಪುರ: `ಸ್ಥಳೀಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಾಗಲೇ ತಾಯಿ ತಂದೆ ಹೆಸರಿನಲ್ಲಿ 5 ಮತ್ತು ಬಿಬಿಎಂಪಿ ವತಿಯಿಂದ 9- ಒಟ್ಟು 14 ಕೊಠಡಿಗಳ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು, ಪ್ರಾಚಾರ್ಯರ ಕೋರಿಕೆಯಂತೆ ಇನ್ನೂ ಐದು ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡಲಾಗುವುದು~ ಎಂದು ಶಾಸಕ ಎನ್.ಎಸ್. ನಂದೀಶರೆಡ್ಡಿ ಭರವಸೆ ನೀಡಿದರು.
ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಒಂದು ನೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಿ ಮಾತನಾಡಿದರು.
ನಗರದ ಪ್ರತಿಷ್ಠಿತ ಸರ್ಕಾರಿ ಕಾಲೇಜುಗಳ ಪೈಕಿ ಇದು ಎರಡನೆಯದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಮುಂದೆ ಬರಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿರೀಕ್ಷಿಸಿದ ಎಲ್ಲ ನೆರವನ್ನು ನೀಡಲಾಗುವುದು ಎಂದು ಅವರು ಆಶ್ಯಾಸನೆ ನೀಡಿದರು.
ಇದೇ ಸಂದರ್ಭದಲ್ಲಿ ನಗರ ಸಭೆ ಮಾಜಿ ಸದಸ್ಯ ಬಾಕ್ಸರ್ ನಾಗರಾಜ್, ಕಬ್ಬಡಿ ಪಟು ಕಲ್ಕೆರೆ ಎನ್.ಶ್ರಿನಿವಾಸ್, ವಾಲಿಬಾಲ್ ಆಟಗಾರ ಬ್ರಹ್ಮಾನಂ ರೆಡ್ಡಿ ಮುಂತಾದವರನ್ನು ಸನ್ಮಾನಿಸಲಾಯಿತು.
ಬಿಬಿಎಂಪಿ ಸದಸ್ಯ ಎನ್.ವೀರಣ್ಣ, ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಕೃಷ್ಣಪ್ಪ ಮಾತನಾಡಿದರು. ಬಿಬಿಎಂಪಿ ಸದಸ್ಯೆ ಆರ್.ಮಂಜುಳಾ ದೇವಿ, ಕಾಲೇಜು ಅಭಿವೃಧ್ದಿ ಮಂಡಳಿ ಸದಸ್ಯ ಗುರುಮೂರ್ತಿ, ವೆಂಕಟೇಶ ಶೆಟ್ಟಿ, ಮುಖಂಡ ಗವಿ ಸಿದ್ದಪ್ಪ, ಸಾಮಾಜಿಕ ಕಾರ್ಯಕರ್ತೆ ವೆಂಕಟ ಲಕ್ಷ್ಮಿ ಬೋಧಕ ವರ್ಗದವರು ಇದ್ದರು. ದೈಹಿಕ ಶಿಕ್ಷಣ ಅಧಿಕಾರಿ ಶ್ರೀಕಾಂತ್ ಸ್ವಾಗತಿಸಿದರು.