ರಾಣೆಬೆನ್ನೂರು: ತಾಲ್ಲೂಕಿನ ಗುಡ್ಡದ ಆನ್ವೇರಿ ಗ್ರಾಮದ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಅಜ್ಜಯ್ಯ ಮಂಜಯ್ಯ ಹಿರೇಮಠ (14) ಎಂಬ ಬಾಲಕ ಸ್ವಿಚ್ಬೋರ್ಡ್ ವಿದ್ಯುತ್ ಕೇಬಲ್ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.
ಗುರುವಾರ ಗ್ರಾಮದಲ್ಲಿ ಗಣ್ಯ ವ್ಯಕ್ತಿಯ ಮದುವೆ ಮತ್ತು ಹಾವನೂರು ಜಾತ್ರೆ ಇದ್ದ ಕಾರಣ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು.ಹೀಗಾಗಿ 8ನೇ ತರಗತಿಯ ಶಿಕ್ಷಕಿ ಶೋಭಾ ಅವರು ಪಾಠ ಮಾಡದೇ 7ನೇ ತರಗತಿಯಲ್ಲಿ ಕುಳಿತುಕೊಳ್ಳಲು ಮಕ್ಕಳಿಗೆ ಹೇಳಿದರು. ಇದಲ್ಲದೆ 7ನೇ ತರಗತಿಗೆ ಪಾಠ ಮಾಡುವ ಶಿಕ್ಷಕ ಶಿವಪ್ಪ ಹಡಪದ ಅವರು ಮಧ್ಯಾಹ್ನ 1 ಗಂಟೆಯವರೆಗೆ ಎರಡೂ ತರಗತಿಯ ಮಕ್ಕಳಿಗೆ ಪಾಠ ಹೇಳಿದರು. ಆಗ ಅಜ್ಜಯ್ಯ ತರಗತಿಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಪಾಠ ಮುಗಿದ ಕೂಡಲೇ ಊಟಕ್ಕೆ ಬಿಡಲಾಯಿತು. 8ನೇ ತರಗತಿ ಮಕ್ಕಳು ಕ್ಲಾಸಿಗೆ ಹೋದಾಗ ಸ್ವಿಚ್ ಬೋರ್ಡ್ನ ವಿದ್ಯುತ್ ಕೇಬಲ್ಗೆ ಅಜ್ಜಯ್ಯನ ಶವ ನೇತಾಡುತ್ತಿತ್ತು. ಮುಖ್ಯ ಶಿಕ್ಷಕಿ ಎಚ್. ಚಂದ್ರಮ್ಮ ಕೂಡಲೇ ಮೇಲಾಧಿಕಾರಿಗಳಿಗೆ ಮತ್ತು ಪೊಲೀಸ್ ಠಾಣೆಗೆ ದೂರವಾಣಿಯಲ್ಲಿ ವಿಷಯ ತಿಳಿಸಿದ್ದಾರೆ.
ಅಜ್ಜಯ್ಯನ ತಂದೆ ಮಂಜಯ್ಯ ಸೆಕ್ಯೂರಿಟಿ ಗಾರ್ಡ್ ಕೆಲಸದಲ್ಲಿದ್ದು, ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತ್ದ್ದಿದಾರೆ. ಇವರಿಗೆ ಅಜ್ಜಯ್ಯ ಒಬ್ಬನೇ ಮಗ, ಈತನ ಅಕ್ಕಂದಿರನ್ನು ಮದುವೆ ಮಾಡಿ ಕೊಡಲಾಗಿದೆ. ಮಗನ ಸಾವಿನ ಸುದ್ದಿ ಕೇಳಿದೊಡನೆ ಅಜ್ಜಯ್ಯನ ತಂದೆ-ತಾಯಿ ಕುಸಿದು ಬಿದ್ದರು.
ಶಾಲಾ ಅವಧಿಯಲ್ಲಿ ಶಿಕ್ಷಕರೇ ಅಜ್ಜಯ್ಯನಿಗೆ ಹೊಡೆದು ಕೊಂದಿದ್ದಾರೆ ಅಜ್ಜಯ್ಯನ ತಂದೆ-ತಾಯಿ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಪ್ರೇಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ಕಾರಣ ಗೊತ್ತಾಗಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.