ಕುಂದಾಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಬದಲಾವಣೆಗೆ ಹೊಂದಿಕೊಳ್ಳುವ ಹಾಗೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಗುರಿ ಮುಟ್ಟುವವರೆಗೆ ಪರಿಶ್ರಮ ಪಡಬೇಕು ಆಗ ಬದಲಾವಣೆಯ ಜೊತೆಗೆ ಯಶಸ್ಸಿನ ಬದುಕು ನಿಮ್ಮದಾಗುತ್ತದೆ ಎಂದು ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್ ಹೇಳಿದರು.
ನಗರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಭಾನುವಾರ ಕುಂದಾಪುರದ ಸರಸ್ವತಿ ಗ್ರೂಫ್ ಆಫ್ ಇನ್ಸಿಟ್ಯೂಟ್ ಆಶ್ರಯದಲ್ಲಿ ಪೀಪಲ್ ದಿ ವಿಷನ್ ಸೇವಾ ಸಂಸ್ಥೆ, ರೋಟರಿ ಕ್ಲಬ್ ಕುಂದಾಪುರದ ಸಹಭಾಗಿತ್ವದಲ್ಲಿ ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾಯೋಜತಕತ್ವದಲ್ಲಿ ‘ಟಾರ್ಗೇಟ್ ಕೇರಿಯರ್ ಗೈಡನ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಆರ್ಥಿಕ ತಜ್ಞ ಹಾಗೂ ಉದ್ಯಮಿ ಬಿ.ವಸಂತ ಪಡಿಯಾರ್ ಅವರು ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಠವಾದ ಗುರಿ ಮುಖ್ಯ. ಗುರಿಯನ್ನು ಸ್ಪಷ್ಟ ಪಡಿಸಿಕೊಂಡು ಮುಂದೆ ಹೆಜ್ಜೆ ಹಾಕಿದಾಗ ಮಾತ್ರ ಸಾರ್ಥಕ ಬದುಕು ಸಾಧಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಸಂತೋಷ ಕೋಣಿ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕಾರ್ತಿಕ್ ತಂತ್ರಿ, ಉಷಾ ಎಸ್.ಪೈ ಮಣಿಪಾಲ, ಕುಂದಾಪುರದ ಆದರ್ಶ ಪೂಜಾರಿ ಹಾಗೂ ಜ್ಞಾನೇಶ್ ಶೆಣೈ ಉಪಸ್ಥಿತರಿದ್ದರು.
ಸರಸ್ವತಿ ಗ್ರೂಫ್ ಆಫ್ ಇನ್ಸಿಟ್ಯೂಟ್ ವ್ಯವಸ್ಥಾಪಕ ನಿರ್ದೇಶಕ ರಿತೇಶ್ ಕಾಮತ್ ಸ್ವಾಗತಿಸಿದರು. ಕುಂದಾಪುರ ಡಾಟ್ ಕಾಂ ಸಂಪಾಪಕ ಗೌತಮ ನಾವಡ ನಿರೂಪಿಸಿ, ನವೀನ್ ಕುಮಾರ್ ವಂದಿಸಿದರು.