ಶಿವಮೊಗ್ಗ: ಇಂದಿನ ಹರೆಯದ ವಿದ್ಯಾರ್ಥಿಗಳು ಹಲವು ರೀತಿಯ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿದ್ದು, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಶಾಲೆಗಳಲ್ಲಿ ಆಗಬೇಕು ಎಂದು ಮನೋವೈದ್ಯ ಡಾ.ಕೆ.ಎ. ಅಶೋಕ ಪೈ ಸಲಹೆ ನೀಡಿದರು.
ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಮತ್ತು ಕ್ಷೇತ್ರ ಟ್ರಸ್ಟ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ `ವಿಮೋಚನಾ~ ಭಿತ್ತಿಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪರೀಕ್ಷಾ ಭಯ, ದೈಹಿಕ ಬದಲಾವಣೆ ಮತ್ತಿತರ ಕಾರಣಗಳಿಂದಾಗಿ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಅನುಭವಿಸಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಪ್ರತಿ ಶಾಲೆಯಲ್ಲೂ ಆಪ್ತ ಸಲಹೆಗಾರರಿರಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಸಾವು ಕಾಣುತ್ತಿರುವವರಲ್ಲಿ ಹೃದಯಘಾತದ ನಂತರದ ಸ್ಥಾನ ಮಾನಸಿಕ ಒತ್ತಡಕ್ಕೆ ಲಭಿಸಿದೆ. ಈ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಭಿವೃದ್ಧಿ ಉಪ ಕಾರ್ಯದರ್ಶಿ ರಾಜಗೋಪಾಲ್ ಮಾತನಾಡಿ, ಮಕ್ಕಳಲ್ಲಿ ಅಹಂಕಾರದ ಬದಲು ಆತ್ಮವಿಶ್ವಾಸ ಮೂಡಿಸಬೇಕು. ಪೋಷಕರು ತಮ್ಮ ಮಕ್ಕಳ ಸಾಮಾರ್ಥ್ಯ ಅರಿತು ಅದಕ್ಕೆ ತಕ್ಕಂತೆ ಅವರನ್ನು ಬೆಳೆಸಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಎಸ್. ಪರಮಶಿವಪ್ಪ ಮಾತನಾಡಿ, ಹೆಚ್ಚಿನ ಅಂಕ ತೆಗೆದು ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ತಂದೆ-ತಾಯಿಗಳು ಮನೆಯಲ್ಲಿ ಒತ್ತಡ ಹಾಕಿದರೆ, ಶಾಲೆಯಲ್ಲಿ ಶಿಕ್ಷಕರು ತಮ್ಮ ಶಾಲೆಗೆ ಹೆಚ್ಚಿನ ಫಲಿತಾಂಶ ಸಿಗಬೇಕೆಂದು ವಿದ್ಯಾರ್ಥಿಗಳ ಒತ್ತಡ ಹಾಕುತ್ತಿದ್ದಾರೆ. ಜೀವನದ ಉದ್ದೇಶ ಪರೀಕ್ಷೆ ತೇರ್ಗಡೆಯಾಗುವುದು ಒಂದೇ ಅಲ್ಲ ಎಂದರು.
ಭಿತ್ತಿಪತ್ರವನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಪಾವಿನ್ ಉದ್ಘಾಟಿಸಿದರು. ವೈದ್ಯ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಕೆ.ಆರ್. ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಗುರುದತ್ ಉಪಸ್ಥಿತರಿದ್ದರು.