ವಿಜಾಪುರ: ಬ್ರಿಟಿಷರು ಮರೆಮಾಚಿದ ಭಾರತದ ನೈಜ ಇತಿಹಾಸವನ್ನು ಇಂದಿನ ವಿದ್ಯಾರ್ಥಿಗಳಿಗೆ ಭೋದಿಸಬೇಕು. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರು ನೆರವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ ಹೇಳಿದರು.
ನಗರದ ಕಂದಗಲ್ಲ ಹನಮಂತರಾಯ ರಂಗಮಂದಿರಲ್ಲಿ ಈಚೆಗೆ ಶಿಕ್ಷಕರಿಗಾಗಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ವಿಷಯದ ನೂತನ ಪಠ್ಯಾಧಾರಿತ ಪರಿಚಯಾತ್ಮಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರ್ಥಶಾಸ್ತ್ರದ ಪಿತಾಮಹ ಎಂದರೆ ಆ್ಯಡಂ ಸ್ಮಿತ್ ಅವರ ಹೆಸರು ಮಾತ್ರ ನಮಗೆ ತಿಳಿದ ವಿಷಯ. ಅದಕ್ಕೂ ಮುಂಚೆ ಇತಿಹಾಸ ಪುಟಗಳನ್ನು ತೆರೆದಾಗ ಚಾಣಕ್ಯ ಅರ್ಥಶಾಸ್ತ್ರದ ಪಂಡಿತ, ಪಿತಾಮಹ ಹಾಗೂ ಅವರು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದರು ಎಂಬುದನ್ನು ನಮ್ಮ ಭಾರತದ ನೈಜ ಇತಿಹಾಸದಿಂದ ಮಾತ್ರ ಮಕ್ಕಳಿಗೆ ತಿಳಿಸಬೇಕಾಗಿದೆ. ಇಂತಹ ಹಲವು ಸಂಗತಿಗಳು ಬ್ರಿಟಿಷ ಮರೆಮಾಚಿದ ಇತಿಹಾಸದಲ್ಲಿ ಅಡಗಿವೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಗುತ್ತಿ ಜಂಬುನಾಥ ಮಾತನಾಡಿ, ಸ್ವಾಮಿ ವಿವೇಕಾನಂದರು ಹಾಗೂ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ 2008 ಜಾರಿಗೊಳಿಸಿ ಏಕ ರೂಪದ ಶಿಕ್ಷಣಕ್ಕೆ ಸರ್ಕಾರವು ಅನುವು ಮಾಡಿಕೊಟ್ಟಿದೆ. ಜಿಲ್ಲೆಯು ಶೈಕ್ಷಣಿಕವಾಗಿ ಬರಗಾಲ ಎಂಬ ಹಣೆಪಟ್ಟಿಯಿಂದ ಹೊರಬರಬೇಕಾದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ ನೂರು ಫಲಿತಾಂಶ ನೀಡಿದ ಸಮಾಜ 68 ಶಿಕ್ಷಕರನ್ನು ಸನ್ಮಾನಿಸಲಾಯಿತು ಶಿಕ್ಷಣಾಧಿಕಾರಿ ನಾಗೇಂದ್ರ ಸಿಂಧನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎನ್.ಹಕೀಂ,ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೈ ಕೊಣ್ಣೂರ, ವಿಷಯ ಪರಿವೀಕ್ಷಕ ಎನ್.ಎಸ್ ಸಿನ್ನೂರ, ಜಿ.ಎಸ್. ಪೂಜಾರಿ ಉಪಸ್ಥಿತರಿದ್ದರು.