ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು ಅತಂತ್ರ

ಹೊಸ ಮೊರಾರ್ಜಿ ಶಾಲೆಗಳ ಪ್ರವೇಶಕ್ಕೆ ತಾತ್ಕಾಲಿಕ ತಡೆ
Last Updated 1 ಜೂನ್ 2013, 10:48 IST
ಅಕ್ಷರ ಗಾತ್ರ

ಯಾದಗಿರಿ: ವಸತಿ ಶಾಲೆಯ ಪ್ರವೇಶದ ಕನಸು ಕಂಡಿದ್ದ ಹಲವಾರು ವಿದ್ಯಾರ್ಥಿಗಳು ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸರ್ಕಾರವೇ ಆರಂಭಿಸಿದ ಹೊಸ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದರೂ, ಪ್ರವೇಶ ಪಡೆಯಲಾರದ ಪೇಚಾಡುತ್ತಿದ್ದಾರೆ.

ಹೌದು, ಜಿಲ್ಲೆಯಲ್ಲಿ ಹೊಸದಾಗಿ ಆರಂಭಿಸಿದ ನಾಲ್ಕು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಒಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಯುವಂತೆ ಮೇಲಧಿಕಾರಿಗಳು ಮೌಖಿಕ ಆದೇಶ ನೀಡಿದ್ದು, ಜಿಲ್ಲೆಯ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಂಜೂರಾದ ಮೊರಾರ್ಜಿ ದೇಸಾಯಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಕೌನ್ಸೆಲಿಂಗ್ ನಡೆದು ಆಯ್ಕೆಯಾದ ವಿದ್ಯಾರ್ಥಿಗಳು ಈಗ ಅತಂತ್ರರಾಗಿದ್ದಾರೆ. ಈ ವರ್ಷದಿಂದಲೇ ಪ್ರವೇಶ ಪಡೆಯುವಂತೆ ಸೂಚಿಸಿದ್ದ ಸರ್ಕಾರ, ಇದೀಗ ಏಕಾಏಕಿ ಪ್ರವೇಶಕ್ಕೆ ತಡೆ ನೀಡುವಂತೆ ಹೇಳಿದೆ.

ಬಿಜೆಪಿ ಸರ್ಕಾರ 2013-14ನೇ ಸಾಲಿಗಾಗಿ ರಾಜ್ಯದಾದ್ಯಂತ 50 ಮೊರಾರ್ಜಿ ದೇಸಾಯಿ ವಸತಿ ಶಾಲೆ, 8 ಅಟಲ್ ಬಿಹಾರಿ ವಾಜಪೇಯಿ ಮಾದರಿ ಶಾಲೆ ಹಾಗೂ 12 ಏಕಲವ್ಯ ಶಾಲೆಗಳನ್ನು ಮಂಜೂರು ಮಾಡಿತ್ತು.

ಈ ವಸತಿ ಶಾಲೆಗಳು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿತ್ತು.

ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದ್ದು, ಹೊಸ ವಸತಿ ಶಾಲೆಗಳಿಗೆ 6ನೇ ತರಗತಿಗಾಗಿ ಮಕ್ಕಳ ಪ್ರವೇಶ ಪಡೆಯುವಂತೆ ನಿರ್ದೇಶನ ನೀಡಿತ್ತು.

ಇದಕ್ಕೆ ಅನುಗುಣವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಳೆದ ವಾರ ಕೌನ್ಸೆಲಿಂಗ್ ನಡೆಸಿದ್ದರು. ಯಾದಗಿರಿ ಜಿಲ್ಲೆಗೆ ಮಂಜೂರಾದ ನಾಲ್ಕು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಒಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ ಕೌನ್ಸೆಲಿಂಗ್ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ.

ಆದರೆ ಎರಡು ದಿನಗಳ ಹಿಂದಷ್ಟೇ ಇಲಾಖೆಯ ಹಿರಿಯ ಅಧಿಕಾರಿಗಳು ಮೌಖಿಕ ಸೂಚನೆ ನೀಡಿದ್ದು, ಹೊಸದಾಗಿ ಮಂಜೂರಾದ ವಸತಿ ಶಾಲೆಗಳಿಗೆ ಪ್ರವೇಶ ಪಡೆಯದಂತೆ ತಿಳಿಸಿದ್ದಾರೆ.

ಇದರಿಂದಾಗಿ ಜಿಲ್ಲೆಯಲ್ಲಿ ಕೌನ್ಸೆಲಿಂಗ್ ಮೂಲಕ ಆಯ್ಕೆಯಾದ ಸುಮಾರು 280 ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಪ್ರಶ್ನೆ ಕಾಡುವಂತಾಗಿದೆ.

ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ಐದು ವಸತಿ ಶಾಲೆಗಳು ಆರಂಭವಾಗಿರುವುದರಿಂದ ಸಹಜವಾಗಿಯೇ ಖುಷಿಯಾಗಿದ್ದ ಪಾಲಕರು, ಇದೀಗ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿದೆ.

ಗ್ರಾಮದ ಸನಿಹದಲ್ಲಿಯೇ ವಸತಿ ಶಾಲೆ ಆರಂಭವಾಗುತ್ತದೆ ಎಂದು ತಿಳಿದ ಪಾಲಕರು ಮಕ್ಕಳನ್ನು ಹೊಸ ಶಾಲೆಗೆ ಕಳುಹಿಸಲು ತಯಾರಿ ನಡೆಸಿದ್ದರು. ಅದರಂತೆ ಸಂಬಂಧಪಟ್ಟ ಇಲಾಖೆ ನೀಡಿದ ಪ್ರಕಟಣೆಯಂತೆ 5ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ಗೆ ಹಾಜರಾಗಿದ್ದರು.

ಪ್ರತಿ ಶಾಲೆಯಲ್ಲಿ ತಲಾ 50 ಮಕ್ಕಳಿಗೆ ಪ್ರವೇಶ ನೀಡಲಾಗುದ್ದು, ಕೌನ್ಸೆಲಿಂಗ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಅನೇಕರು ಪ್ರವೇಶ ಪಡೆದಿದ್ದಾರೆ. ಆದರೆ ಇದುವರೆಗೆ ಪ್ರವೇಶದ ಪಡೆಯದೇ ಇದ್ದ ವಿದ್ಯಾರ್ಥಿಗಳು ಈಗ ತೊಂದರೆ ಅನುಭವಿಸುವಂತಾಗಿದೆ.
ಆಯಾ ವಸತಿ ಶಾಲೆಗಳಿಗೆ ಹೋಗಿ ಪ್ರವೇಶ ಕೇಳಿದರೆ, ತಾತ್ಕಾಲಿಕವಾಗಿ ಪ್ರವೇಶ ರದ್ದುಪಡಿಸಲಾಗಿದೆ ಎಂಬ ಉತ್ತರವನ್ನು ವಸತಿ ಶಾಲೆಯ ಅಧಿಕಾರಿಗಳು ನೀಡುತ್ತಿದ್ದಾರೆ ಎಂದು ಪಾಲಕರು ದೂರಿದ್ದಾರೆ.

ಸರ್ಕಾರದ ಸೂಚನೆಯಂತೆ ಪ್ರವೇಶ ಪ್ರಕ್ರಿಯೆ ನಡೆಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಏನು ಮಾಡಬೇಕು ಎನ್ನುವುದು ತಿಳಿಯದ ಸ್ಥಿತಿಯಲ್ಲಿದ್ದಾರೆ. ಪ್ರವೇಶ ನೀಡುವಂತೆ ಮೊದಲು ಸೂಚಿಸಿ ಎರಡು ದಿನಗಳ ಹಿಂದಷ್ಟೇ ಪ್ರವೇಶ ನೀಡದಂತೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಏನು ಹೇಳಬೇಕು ಎಂಬುದೇ ತೋಚದಂತಾಗಿದ್ದಾರೆ.

ಸಮಸ್ಯೆ ಪರಿಹರಿಸಲು ಆದ್ಯತೆ: `ವಸತಿ ಶಾಲೆಯ ಪ್ರವೇಶಕ್ಕೆ ತಡೆ ನೀಡಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ' ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮನಗೌಡ ತಿಳಿಸಿದ್ದಾರೆ.
`ಇದು ನಮಗೂ ತಲೆನೋವಾಗಿ ಪರಿಣಮಿಸಿದೆ. ಕೌನ್ಸೆಲಿಂಗ್ ಪೂರ್ಣಗೊಂಡು ಕೆಲ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ದೊಡ್ಡ ಜಿಲ್ಲೆಗಳಲ್ಲಿ ಕೌನ್ಸೆಲಿಂಗ್ ಅರ್ಧಕ್ಕೆ ನಿಂತಿದೆ.

ಯಾದಗಿರಿ ಜಿಲ್ಲೆಯಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಹಿರಿಯ ಅಧಿಕಾರಿಗಳು ಹೊಸ ವಸತಿ ಶಾಲೆಗಳಿಗೆ ಪ್ರವೇಶ ಬೇಡ ಎಂದು ಹೇಳಿದ್ದಾರೆ. ಕಟ್ಟಡ ಇನ್ನಿತರ ಮೂಲಸೌಲಭ್ಯ ಇಲ್ಲದೇ ಶಾಲೆ ಆರಂಭಿಸುವುದು ಬೇಡ ಎಂದು ತಿಳಿಸಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸೂಚನೆಯನ್ನು ಕೌನ್ಸೆಲಿಂಗ್‌ಗಿಂತ ಮೊದಲೇ ನೀಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ.

ಈ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮುಂದೇನು ಮಾಡಬೇಕು ಎಂಬುದನ್ನು ಯೋಚಿಸಲಾಗುವುದು. ಮೊದಲೇ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT