ಯಲಹಂಕ: `ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ಆತ್ಮಗೌರವ ಬೆಳೆಸಿಕೊಂಡು ತಾವು ಮಾಡುವ ಕೆಲಸದಲ್ಲಿ ನಿರ್ದಿಷ್ಟತೆ ಕಾಯ್ದುಕೊಂಡು ಬಂದರೆ ಸಾಧನೆಯ ಗುರಿ ಮುಟ್ಟಲು ಸಾಧ್ಯ~ ಎಂದು ಬಿಇಎಸ್ ಶಿಕ್ಷಣ ಸಂಸ್ಥೆಯ ಪ್ರೊ.ಟಿ.ಎನ್.ರಾಜು ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರದ ಕಾವೇರಿ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, `ಇಂದಿನ ಸ್ಪರ್ಧಾ ಪ್ರಪಂಚದಲ್ಲಿರುವ ಮಕ್ಕಳು ಸವಾಲುಗಳನ್ನು ಎದುರಿಸುವ ಕೌಶಲ ಬೆಳೆಸಿಕೊಳ್ಳಬೇಕು.
ಮಾಡುವ ಕೆಲಸದಲ್ಲಿ ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು~ ಎಂದು ಕಿವಿಮಾತು ಹೇಳಿದರು.
`ವಿದ್ಯಾರ್ಥಿಗಳು ತಾವು ಮಾಡಿದ ಸಾಧನೆಗಳ ಬಗ್ಗೆ ಅಂದೇ ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಇದು ಮುಂದೊಂದು ದಿನ ಸಂಪನ್ಮೂಲ ಘಟಕವಾಗಿ ಹೊರಹೊಮ್ಮುವುದರ ಜೊತೆಗೆ ಮತ್ತಷ್ಟು ಉತ್ತುಂಗಕ್ಕೇರಲು ನೆರವಾಗುತ್ತದೆ~ ಎಂದರು.
ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎಂ.ದೇವರಾಜಪ್ಪ, ಕಾರ್ಯದರ್ಶಿ ಎನ್.ಸಿ.ಇಂದಿರಾ, ಟ್ರಸ್ಟಿಗಳಾದ ಡಿ.ಸಂತೋಷ್, ಡಾ. ವೈಶಾಖ್, ಪ್ರಾಂಶುಪಾಲರಾದ ಮರ್ಸಿ ಡ್ಯಾನಿ ಮತ್ತಿತರರು ಉಪಸ್ಥಿತರಿದ್ದರು.