ನೆಲಮಂಗಲ: `ಕನಸು ಕಾಣುವ ಮತ್ತು ಕಂಡ ಕನಸನ್ನು ನನಸಾಗಿಸಿಕೊಳ್ಳುವ ಇಚ್ಛಾಶಕ್ತಿ ಇರುವವರು ಮಾತ್ರ ಉನ್ನತವಾದುದ್ದನ್ನು ಸಾಧಿಸುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳು ನಕ್ಷತ್ರದಂತೆ ಉಜ್ವಲವಾಗಿ ಬೆಳಗುವಂತಾಗಬೇಕು~ ಎಂದು ಶಾಸಕ ಎಂ.ವಿ.ನಾಗರಾಜು ಹೇಳಿದರು.
ಸ್ಥಳೀಯ ಭೋವಿ ಜಾಗೃತಿ ಸಂಘದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ 110 ಮಂದಿ ಪ್ರತಿಭಾನ್ವಿತ ಭೋವಿ ಜನಾಂಗದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ, ಕೀಲು- ಮೂಳೆ ತಜ್ಞ ವೈದ್ಯ ಡಾ.ಟಿ.ವಿ.ಮರಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, `ಜ್ಞಾನಿಯಾದವನು ಸ್ವ-ಸಾಮರ್ಥ್ಯದಿಂದ ಬದುಕಬಲ್ಲ. ಹೀಗಾಗಿ, ಜ್ಞಾನಾರ್ಜನೆ ವಿದ್ಯಾರ್ಥಿಗಳ ಜೀವನದ ಉದ್ದೇಶವಾಗಬೇಕು~ ಎಂದರು.
ಇದೇ ಸಂದರ್ಭದಲ್ಲಿ 110 ಪ್ರತಿಭಾನ್ವಿತ ಭೋವಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮುಖ್ಯ ಶಿಕ್ಷಕ ಕೃಷ್ಣಪ್ಪ ಮತ್ತು ಉಪ ಪ್ರಾಂಶುಪಾಲ ವೆಂಕಟೇಶ್ ವಿದ್ಯೆಯ ಮಹತ್ವದ ಬಗ್ಗೆ ವಿವರಿಸಿದರು.
ಬಿಜೆಪಿ ಮುಖಂಡರಾದ ಹನುಮಂತು, ಜಿ.ಪಂ. ಸದಸ್ಯ ರಾಮು, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಪುರಸಭಾ ಮಾಜಿ ಅಧ್ಯಕ್ಷ ಮುರಾರಯ್ಯ, ಮುಖಂಡರಾದ ಮುನಿರಾಮಯ್ಯ, ರಾಜಮ್ಮ, ರಾಮಸ್ವಾಮಿ, ಲೆಕ್ಕಾಧಿಕಾರಿ ಗಿರಿಯಪ್ಪ, ಶಿಕ್ಷಣ ಸಂಯೋಜಕ ಮುತ್ತಗಂಗಯ್ಯ, ಮಹದೇವ, ಚಿಕ್ಕಣ್ಣ, ಸಹಾಯಕ ಆಯುಕ್ತ ಚಿಕ್ಕವೆಂಕಟಪ್ಪ ವೇದಿಕೆಯಲ್ಲಿದ್ದರು.