ತಿ.ನರಸೀಪುರ: ವಿದ್ಯಾರ್ಥಿನಿಯ ಜತೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ತಾಲ್ಲೂಕಿನ ಗರ್ಗೇಶ್ವರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ.
ಎಂ.ಮಂಜುನಾಥ್ ಎಂಬ ಶಿಕ್ಷಕ ವಿದ್ಯಾರ್ಥಿನಿಯ ಜತೆ ಅಸಭ್ಯವಾಗಿ ನಡೆದುಕೊಂಡು ಅಮಾನತಿಗೆ ಒಳಗಾಗಿದ್ದಾರೆ. 7 ನೇ ತರಗತಿಯ ವಿದ್ಯಾರ್ಥಿನಿಯ ಜತೆ ಅನುಚಿತವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಹಾಗೂ ಗ್ರಾಮಸ್ಥರು ಶನಿವಾರ ಶಾಲೆಗೆ ಬಂದು ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು.
ವಿಷಯ ತಿಳಿದು ಶಾಲೆಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ಲೋಕೇಶ್, ಬಿಆರ್ಸಿ ಕೃಷ್ಣಪ್ಪ, ಶಿಕ್ಷಣ ಸಂಯೋಜಕ ಎಚ್.ಎಂ.ಶಂಕರ್, ದೈಹಿಕ ಶಿಕ್ಷಣ ಸಂಯೋಜಕ ಸಂಪತ್ ದೊರೈರಾಜ್ ಅವರು ಪೋಷಕರು, ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು. ನಂತರ ಬಿಇಓ ಲೋಕೇಶ್ ಶಿಕ್ಷಕರನ್ನು ಕರ್ತವ್ಯದಿದ ಅಮಾನತು ಮಾಡಿ ಆದೇಶ ನೀಡಿದ್ದಾರೆ. ಗ್ರಾಮಸ್ಥರು ಶಾಲೆಗೆ ಭೇಟಿ ನೀಡುವ ವಿಷಯ ತಿಳಿಯುತ್ತಿದ್ದಂತೆ ಶಿಕ್ಷಕ ಮಂಜುನಾಥ್ ಶಾಲೆಯಿಂದ ಹೊರಗೆ ಹೊರಟು ಹೋಗಿದ್ದರು.