ಮದುರೆ (ಪಿಟಿಐ): ತಂದೆಯ ಅನುಮತಿ ಇಲ್ಲದೆ ಮದುವೆಯಾದಳು ಎಂಬ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಗೆ ಹಾಕಿದ್ದು ಸರಿಯಲ್ಲ ಮತ್ತು ಈ ಕಾರಣಕ್ಕೆ ವಿದ್ಯಾಭ್ಯಾಸಕ್ಕೆ ಅಡ್ಡಿ ಉಂಟುಮಾಡುವ ಅಧಿಕಾರ ಕಾಲೇಜಿನ ಆಡಳಿ ವರ್ಗಕ್ಕೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ನ ಮದುರೆ ಪೀಠವು ತೀರ್ಪು ನೀಡಿದೆ.
ಬಿ. ಟೆಕ್ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ಸರಸ್ವತಿ ಅವರನ್ನು ಪುನಃ ಕಾಲೇಜಿಗೆ ಸೇರಿಸಿಕೊಂಡು ವ್ಯಾಸಂಗ ಮುಂದುವರಿಸಲು ಸಹಕರಿಸಬೇಕು ಎಂದು ನ್ಯಾಯಮೂರ್ತಿ ಎನ್. ಕಿರುಬರಕರನ್, ತಿರುಚೆಂದುರ್ನ ಡಾ. ಶಿವಂತಿ ಆದಿತ್ಯನಾರ್ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ವರ್ಗಕ್ಕೆ ಆದೇಶಿಸಿದ್ದಾರೆ.
ಅರ್ಜಿದಾರರು ಪ್ರೌಢ ವಯಸ್ಕಳಾಗಿರುವುದರಿಂದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದ್ದರಿಂದ ತಂದೆಯ ಅನುಮತಿ ಇಲ್ಲದೆ ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಕಾಲೇಜಿನಿಂದ ಹೊರಗೆ ಹಾಕಲು ಬರುವುದಿಲ್ಲ ಎಂದು ತಿಳಿಸಿರುವ ನ್ಯಾಯಮೂರ್ತಿಗಳು, ಸರಸ್ವತಿಗೆ ಪುನಃ ಪ್ರವೇಶ ಅವಕಾಶ ನೀಡಬೇಕು ಮತ್ತು ಕಿರುಕುಳ ನೀಡಬಾರದು ಎಂದು ಆದೇಶಿಸಿದ್ದಾರೆ.
ಸಂಬಂಧಿಕ ಮಹಿಳೆಯೊಬ್ಬರು ಆಶ್ರಯ ನೀಡಿದ್ದರಿಂದ ಸೇನೆಯಲ್ಲಿ ಇರುವ ಅವರ ಮಗನನ್ನು ಮದುವೆ ಆಗಿದ್ದಕ್ಕೆ ಕುಟುಂಬವನ್ನು ಸರಿಯಾಗಿ ನಡೆಸಲಾಗದ ತನ್ನ ತಂದೆ ಕಾಲೇಜಿಗೆ ದೂರು ನೀಡಿದ್ದರು. ಇದರಿಂದ ಕಾಲೇಜಿನ ಆಡಳಿತ ವರ್ಗವು ಕಾಲೇಜಿನ ಪ್ರವೇಶಕ್ಕೆ ನಿರಾಕರಿಸಿದೆ ಹಾಗೂ ಬಲವಂತವಾಗಿ ಸಹಿ ಪಡೆದು ವರ್ಗಾವಣೆ ಪತ್ರ ನೀಡಿದೆ ಎಂದು ಸರಸ್ವತಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಿದ್ದರು.