ಸಿರುಗುಪ್ಪ: ಬರಪೀಡಿತ ಪ್ರದೇಶಗಳಲ್ಲಿ ಬೆಳೆನಷ್ಟ ಪರಿಹಾರ ರೈತರಿಗೆ ಒದಗಿಸಬೇಕು ಮತ್ತು ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಜೆಡಿಎಸ್ನ ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ವಿದ್ಯುತ್ ಮಿತವ್ಯಯ ಗೊಳಿಸುವಂತೆ ಜೆಡಿಎಸ್ ಪಕ್ಷದ ವತಿಯಿಂದ ಗುರುವಾರ ಕಂದಾಯ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿದರು.ಮುಂಗಾರುಮಳೆ ವಿಫಲ, ವಿದ್ಯುತ್ ಕ್ಷಾಮದಿಂದ ಬಳಲುತ್ತಿರುವ ರೈತರು ಕಂಗಾಲಾಗಿದ್ದಾರೆ, ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದೆ ಅಲ್ಪಸ್ವಲ್ಪ ಸುರಿದ ಮಳೆಗೆ ರೈತರು ಕೃಷಿ ಚಟುವಟಿಕೆಗಳಿಗೆ ಸಾಲ ಸೋಲ ವೆಚ್ಚಮಾಡಿ ಬಿತ್ತನೆ ಮಾಡಿದ್ದಾರೆ, ಆದರೆ ಮಳೆ ವಿಫಲವಾಗಿದೆ, ಏತ ನೀರಾವರಿಗೆ ವಿದ್ಯುತ್ ಕ್ಷಾಮ ಎದುರಾಗಿ ನೀರಲ್ಲದೇ ಬೆಳೆ ಕಮರಿಹೋಗುತ್ತಿದೆ.
ರೈತರಿಗೆ ಇನ್ನು ಉಳಿಗಾಲವಿಲ್ಲ ಬೆಳೆಯಂತೂ ಇಲ್ಲ ಅವರ ಬದುಕು ದುಸ್ತರವಾಗಿದೆ ಇಂತಹ ಸಮಯದಲ್ಲಿ ಸರ್ಕಾರ ನೆರವಿಗೆ ಬರಬೇಕೆಂದು ಅವರು ಆಗ್ರಹಿಸಿದ್ದಾರೆ.ಈ ವರ್ಷ ಪಡೆದ ಬೆಳೆಸಾಲವನ್ನೇಲ್ಲಾ ರೈತರು ಭೂಮಿಗೆ ಸುರಿದಿದ್ದಾರೆ, ಬೆಳೆನೇ ಬರದೇ ಇದ್ದರೆ ಇನ್ನು ಸಾಲ ಮರುಪಾವತಿ ಹೇಗೆ ಎಂಬ ಚಿಂತನೆಯಲ್ಲಿರುವ ರೈತರಿಗೆ ಮುಂದಿನ ವರ್ಷವಾದರೂ ಪಾವತಿ ಮಾಡಲು ಹೇಗೆ ಸಾಧ್ಯ, ಸರ್ಕಾರ ಈ ವರ್ಷದ ಕೃಷಿ ಸಾಲ ಪಾವತಿಗೆ ವಿನಾಯಿತಿ ತೋರಿರು ವುದು ಸೂಕ್ತವಲ್ಲ ರೈತರಿಗೆ ಎರಡು ವರ್ಷದ ಸಾಲದ ಹೊರೆಯಾಗುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ, ಮುಖ್ಯಮಂತ್ರಿ ಒಂಟಿಯಾಗಿ ತಮ್ಮ ಒಳಜಗಳದಲ್ಲಿ ಅಭಿವೃದ್ಧಿ ಕೆಲಸವನ್ನೇ ಮರೆತಿದ್ದಾರೆ, ವಿದ್ಯುತ್ ಕ್ಷಾಮದಿಂದ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂದು ದೂರಿದರು.
ಪಟ್ಟಣದ ಪ್ರದೇಶದಲ್ಲಿ ಝಗಮಗಿ ಸುವ ನಿರಂತರ ವಿದ್ಯುತ್ನ್ನು ಮಿತವ್ಯಯ ಮಾಡಿ ಗ್ರಾಮಾಂತರ ಪ್ರದೇಶಕ್ಕೆ ಮತ್ತು ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್ ಒದಗಿಸುವಂತೆ ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಟಿ. ದೊಡ್ಡವೀರೇಶಗೌಡ ಆಗ್ರಹಿಸಿದ್ದಾರೆ.
ಪಕ್ಷದ ಮುಖಂಡರಾದ ಎಚ್.ಎಂ. ಮಲ್ಲಿಕಾರ್ಜುನ, ಗಟ್ಟಿ ರಾಮಲಿಂಗಪ್ಪ, ಗೋಪಾಲಕೃಷ್ಣ, ಸಾವುಕಾರ ಚನ್ನಪ್ಪ, ರವಿಗೌಡ, ವೀರೇಶ, ಎಸ್. ಶ್ಯಾಮ ಸುಂದರ್, ಬಂದೇಸಾಬ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.