ಕನಕಗಿರಿ: ಪದೇ ಪದೇ ವಿದ್ಯುತ್ ಕಡಿತ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಸದಸ್ಯ ಹಾಗೂ ಜಿಪಂ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ದೂರಿದರು.
ಸತತ ವಿದ್ಯುತ್ ಕಡಿತ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಅವರು ಮಾತನಾಡಿದರು.ವಿದ್ಯುತ್ ಲೋಡ ಶೆಡ್ಡಿಂಗ್ನಿಂದ ರೈತಾಪಿ ವರ್ಗ ಸಂಕಷ್ಟದಲ್ಲಿ ಕಾಲ ಕಳೆಯುತ್ತಿದೆ, ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ರೈತ ವರ್ಗ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಆತ್ಮಹತ್ಯೆ ಹಾದಿ ಹಿಡಿದಿದೆ ಎಂದು ತಿಳಿಸಿದರು.
ರೈತಾಪಿ ವರ್ಗದೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ ಬಹಳ ದಿನ ಬಾಳುವುದಿಲ್ಲ, ಶೀಘ್ರ ಪತನಗೊಳ್ಳಲಿದೆ ಎಂದು ತಿಳಿಸಿದರು. ವಿದ್ಯುತ್ ಪೊರೈಕೆ ಕುರಿತು ಮುಂಜಾಗೃತ ಕ್ರಮ ತೆಗೆದುಕೊಳ್ಳದ ರಾಜ್ಯ ಸರ್ಕಾರ ವಿನಾಃ ಕಾರಣ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸಲಾಗುತ್ತಿದೆ ಎಂದು ಹೇಳಿದರು.
ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹಣ ನೀಡಿದರೂ ಸರಿಯಾದ ವಿದ್ಯುತ್ ನೀಡುತ್ತಿಲ್ಲ ಎಂದು ದೂರಿದರು.ನಗರ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್ ನೀಡಿ ಗ್ರಾಮೀಣ ಭಾಗಕ್ಕೆ ಕಡಿತ ಮಾಡುವ ಮೂಲಕ ಬಂಡವಾಳ ಶಾಹಿಗಳ ಕೈಗೊಂಬೆಯಾಗಿದೆ ಎಂದು ದೂರಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೊನ್ನುರುಸಾಬ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ರಾಮಕೃಷ್ಣ, ಮಾಜಿ ಅಧ್ಯಕ್ಷ ರಾಜಧರ ಖಾನ್, ಜಿಪಂ ಸದಸ್ಯ ಗಂಗಣ್ಣ ಸಮಗಂಡಿ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪರಿಶಿಷ್ಟ ಪಂಗಡದ ಜಿಲ್ಲಾ ಘಟಕದ ಅಧ್ಯಕ್ಷ ಯಮನೂರಪ್ಪ ಸಿಂಗನಾಳ ಪ್ರಮುಖರಾದ ವಿಶ್ವನಾಥಸ್ವಾಮಿ ಮಲ್ಲದಗುಡ್ಡ, ಶರಣೆಗೌಡ ಪಾಟೀಲ, ಕೆ. ಎಚ್. ಕುಲಕರ್ಣಿ, ಬಿ. ವಿ. ಜೋಶಿ, ನಾಗೇಶ ಬಡಿಗೇರ, ಕೀರ್ತಿ ಸೋನಿ, ಹನುಮಂತಪ್ಪ ಹುನಗುಂದ, ವೆಂಕಟೇಶ ಕಂಪ್ಲಿ, ಅಂಬಣ್ಣ ಲೋಕ್ರೆ, ಬಸವರಾಜ ದೇಸಾಯಿ, ಚಂದ್ರು ಬೇಕರಿ, ಹೊಳೆಯಪ್ಪ ನಾಯಕ, ಕಲ್ಯಾಣಪ್ಪ ಅಡವಿಬಾವಿ,ನ ಹೊನ್ನರುಸಾಬ ಉಪ್ಪು, ಟಿ. ಜೆ. ಶ್ರೀನಿವಾಸ ಇತರರು ಹಾಜರಿದ್ದರು.
ಕಲ್ಮಠದಿಂದ ಆರಂಭವಾದ ಪಂಜಿನ ಮೆರವಣಿಗೆ ರಾಜಬೀದಿ, ಡಾ. ಅಂಬೇಡ್ಕರ್ ವೃತ್ತ ಮೂಲಕ ಜೆಸ್ಕಾಂ ಕಾರ್ಯಾಲಯಕ್ಕೆ ತಲುಪಿತು.ಇಂಧನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಘೋಷಣೆ ಕೂಗಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.