ಬೆಂಗಳೂರು: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಳೆದ ಡಿಸೆಂಬರ್ 7ರಿಂದಲೇ ಪೂರ್ವಾನ್ವಯವಾಗುವಂತೆ ರಾಜ್ಯದಲ್ಲಿ ಸರಾಸರಿ ಯೂನಿಟ್ಗೆ 30 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ದರ ಹೆಚ್ಚಳ ಸಂಬಂಧ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಡಿಸೆಂಬರ್ 7ರಂದು ಆದೇಶ ಹೊರಡಿಸಿತ್ತು. ಅದನ್ನು ಯಥಾವತ್ತಾಗಿ ಜಾರಿಗೆ ತರುವ ಸಂಬಂಧ ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪೆನಿಗಳು ಬುಧವಾರ ಆದೇಶ ಹೊರಡಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ.
ದರ ಹೆಚ್ಚಳ ಸಂಬಂಧ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕೆಇಆರ್ಸಿ ಮಾಡಿರುವ ದರ ಹೆಚ್ಚಳವು ಜಾಸ್ತಿ ಇದ್ದು, ಅದನ್ನು ಪುನರ್ ಪರಿಶೀಲಿಸುವಂತೆ ಆಯೋಗಕ್ಕೆ ಮನವಿ ಮಾಡುವುದಾಗಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಚುನಾವಣೆಗೂ ಮುನ್ನ ಹೇಳಿದ್ದರು.
ಆದರೆ ಅವರ ಹೇಳಿಕೆ ಹುಸಿಯಾಗಿದ್ದು, ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆಗಳು ಸೇರಿದಂತೆ ಎಲ್ಲ ರೀತಿಯ ದರ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಮೀಟರ್ ರೀಡಿಂಗ್ ಆಗಿದ್ದರೂ, ಮುಂದಿನ ಬಿಲ್ನಲ್ಲಿ ಡಿಸೆಂಬರ್ 7ರಿಂದ ಅನ್ವಯವಾಗುವಂತೆ ದರ ಹೆಚ್ಚಳದ ವ್ಯತ್ಯಾಸದ ಮೊತ್ತವನ್ನು ಸೇರಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.