ರಾಯಚೂರು: ನಗರದ ಏಳೆಂಟು ಬಡಾವಣೆಗಳು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಹೋಗಲಾಡಿಸಲು ಮಲಿಯಾಬಾದ್ 110 ಕೆವಿ ವಿದ್ಯುತ್ ಉಪ ಕೇಂದ್ರದಿಂದ- ಬೋಳಮಾನದೊಡ್ಡಿ 33 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಎಕ್ಸಪ್ರೆಸ್ ವಿದ್ಯುತ್ ಸಂಪರ್ಕ ಮಾರ್ಗ ಜೋಡಣೆಗೆ 18 ಲಕ್ಷ ಮೊತ್ತದ ಟೆಂಡರ್ನ್ನು ಜೆಸ್ಕಾಂ ಕರೆದಿದ್ದು, 15-20ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಸಯ್ಯದ್ ಯಾಸಿನ್ ತಿಳಿಸಿದ್ದಾರೆ.
ಜೆಸ್ಕಾಂನ ಅಧೀಕ್ಷಕ ಎಂಜಿನಿಯರ್ ಕಚೇರಿಗೆ ಭೇಟಿ ಕಾರ್ಯನಿರ್ವಾಹಕ ಎಂಜಿನಿಯರ್, ಗ್ರಾಮೀಣ ವಿಭಾಗದ ಎಂಜಿನಿಯರ ಜೊತೆ ಚರ್ಚೆ ನಡೆಸಲಾಗಿದೆ. ಶೇ 40ರಷ್ಟು ಬಡಾವೆಗೆ ಸಮರ್ಪಕ ವಿದ್ಯುತ್ ಇಲ್ಲದಿರುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಹೇಳಿದ್ದಾರೆ.
ವಾಸವಿನಗರ, ನೀಲಕಂಠೇಶ್ವರನಗರ, ಪಟೇಲ್ ರಸ್ತೆ, ಹರಿಜನವಾಡ, ಎನ್ಜಿಒ ಕಾಲೊನಿ, ಮಾಣಿಕನಗರ, ಗದ್ವಾಲ್ ರಸ್ತೆ, ಜವಾಹರನಗರ, ಹನುಮಾನ ಟಾಕೀಸ್ ಮತ್ತಿತರ ಬಡಾವಣೆ ಜನತೆ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಲಿಯಾಬಾದ್ 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಬೋಳಮಾನದೊಡ್ಡಿ 33 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ವಿದ್ಯುತ್ ಎಕ್ಸ್ಪ್ರೆಸ್ ಸಂಪರ್ಕ ಮಾರ್ಗ ಜೋಡಣೆಗೆ ಮಂಜೂರಾತಿ ದೊರಕಿದೆ. 18 ಲಕ್ಷ ಮೊತ್ತದ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಕೆಲಸ ಆರಂಭಿಸಲು ಆದೇಶಿಸಿದೆ.
ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸುವ ಭರವಸೆಯನ್ನು ಜೆಸ್ಕಾಂ ಅಧಿಕಾರಿಗಳು ನೀಡಿದರು. ಆದರೆ, ಶಾಲಾ ಮಕ್ಕಳ ಪರೀಕ್ಷೆಯ ಸಮಯ, ಬಿಸಿಲು ಕಾಲ ಆರಂಭವಾಗಿದೆ. 15-20 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಶಾಸಕ ಸಯ್ಯದ್ ಯಾಸಿನ್ ಹೇಳಿದ್ದಾರೆ.
ನಗರದಲ್ಲಿ ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ, ವಿದ್ಯುತ್ ಕಂಬ ಸ್ಥಳಾಂತರ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ರಸ್ತೆ ನಿರ್ಮಾಣ, ವಿಸ್ತರಣೆ ಕಾಮಗಾರಿಗೆ ಅಡ್ಡಿಯಾಗಿದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಸೂಚಿಸಿದ್ದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.