ಚಿಕ್ಕಬಳ್ಳಾಪುರ: ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುವ ಮತ್ತು ಅಹವಾಲುಗಳನ್ನು ಸ್ವೀಕರಿಸುವ ಉದ್ದೇಶದಿಂದ ಬೆಸ್ಕಾಂ ಶುಕ್ರವಾರ ಗ್ರಾಹಕರ ಸಂವಾದ ಸಭೆ ಹಮ್ಮಿಕೊಂಡಿತ್ತು. ಕೆಇಬಿ ಕಾಲೋನಿಯ ಸರ್ ಎಂ.ವಿಶ್ವೇಶ್ವರಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ರೈತ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.
ಅನಿಯಮಿತ ವಿದ್ಯುತ್ ಪೂರೈಕೆಯಿಂದ ಕೆಲ ಬಾರಿ ತೊಂದರೆಯಾಗುತ್ತದೆ ಎಂದು ರೈತರು ದೂರಿದರೆ, ಮೀಟರ್ ಅಳವಡಿಕೆ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹೇಳಿದರು. ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ವಿದ್ಯುತ್ ಪೂರೈಸಿದರೆ ಅನುಕೂಲವಾಗುತ್ತದೆ ಎಂದು ಅವರು ಮನವಿ ಮಾಡಿದರು. ಬೆಸ್ಕಾಂ ಅಧಿಕಾರಿಗಳಾದ ಕೃಷ್ಣಪ್ಪ, ಎ.ರಮೇಶ್, ರಮೇಶ್, ಚಂದ್ರಶೇಖರ ಪ್ರಸಾದ, ಬೆಸ್ಕಾಂ ಯೂನಿಯನ್ ಅಧ್ಯಕ್ಷ ಎಸ್.ಎಂ.ಅಶ್ವತ್ಥ್ನಾರಾಯಣ, ರೈತ ಸಂಘದ ಮುನಿರಾಮೇಗೌಡ, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ, ಜಿಲ್ಲಾ ಮುಖಂಡರಾದ ಅಬ್ದುಲ್ ರೌಫ್, ಜಿ.ಎನ್.ನಾರಾಯಣಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.