ಆಲೂರು: ಹಲಸಿನ ಹಣ್ಣು ತಿನ್ನಲು ಕಾಫಿ ತೋಟಕ್ಕೆ ಬಂದಿದ್ದ ಆನೆಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಆಲೂರು ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿ ಹಲಸೂರಿನಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಗ್ರಾಮದ ಗೋಪಾಲೇಗೌಡ ಅವರ ಕಾಫಿ ತೋಟದಲ್ಲಿ ಈ ಘಟನೆ ನಡೆದಿದ್ದು, ಮಂಗಳವಾರ ಮಧ್ಯಾಹ್ನದ ನಂತರ ಆನೆ ಸತ್ತಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾಫಿ ತೋಟದಲ್ಲಿದ್ದ ಹಲಸಿನ ಮರದಿಂದ ಒಂದು ಹಣ್ಣು ಕಿತ್ತಿದ್ದ ಆನೆ ಇನ್ನೊಂದು ಹಣ್ಣು ತಿನ್ನಲು ಸಮೀಪದಲ್ಲಿದ್ದ ಬಂಡೆಯ ಮೆಲೆ ಕಾಲಿಟ್ಟು ಸೊಂಡಿಲನ್ನು ಮೇಲಕ್ಕೆತ್ತಿದ್ದ ಸಂದರ್ಭದಲ್ಲಿ ಅಲ್ಲಿ ಹಾದು ಹೋಗಿರುವ 11ಕೆ.ವಿ. ವಿದ್ಯುತ್ ತಂತಿ ಸ್ಪರ್ಶವಾಗಿ ಆನೆ ಸತ್ತಿರಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ ತಿಳಿಸಿದ್ದಾರೆ.
ದನ ಕಾಯುವ ಯುವಕ ಆನೆಯ ಮೃತ ದೇಹವನ್ನು ಕಂಡು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾನೆ. ನಂತರ ಸ್ಥಳಕ್ಕಾಗಮಿಸಿದ ಇಲಾಖೆಯವರು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಆನೆಗೆ ಸುಮಾರು 20 ರಿಂದ 22 ವರ್ಷವಾಗಿರಬಹುದು. ಒಂದರಿಂದ ಒಂದೂವರೆ ಅಡಿ ಉದ್ದದ ಕೋರೆಗಳಿದ್ದವು. ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲಕ್ಷ್ಮಣ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್, ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.