ಚಿಕ್ಕಮಗಳೂರು: ಭದ್ರಾ ಅಭಯಾ ರಣ್ಯದ ತರೀಕೆರೆ ತಾಲ್ಲೂಕಿನ ತಣಿಗೆ ಬೈಲು ವನ್ಯಜೀವಿ ವಲಯದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಕ್ರಮವಾಗಿ ಹೈಟೆನ್ಶನ್ ವೈರ್ಗಳಿಂದ ವಿದ್ಯುತ್ ಅನ್ನು ತಮ್ಮ ಹೊಲಗದ್ದೆಗಳು ಮತ್ತು ಜಮೀನುಗಳ ತಂತಿಬೇಲಿಗೆ ಅಕ್ರಮವಾಗಿ ಸಂಪರ್ಕ ಪಡೆಯಲಾಗಿದೆ.
ಇದರಿಂದ ಜನರು ಮತ್ತು ವನ್ಯಜೀವಿಗಳು ವಿದ್ಯುತ್ ತಗುಲಿ ಸಾವನ್ನಪ್ಪುತ್ತಿರುವುದು ದಿನೇ ದಿನೇ ಹಚ್ಚುತ್ತಿದೆ ಎಂದು ಈ ಭಾಗದ ಗ್ರಾಮಾರಣ್ಯ ಸಮಿತಿಗಳ ಮುಖಂಡರು ದೂರಿದ್ದಾರೆ.
ತಣಿಗೆಬೈಲು, ನಂದಿಬಟ್ಟಲು, ಜಯ ಪುರ, ಮಂಚೆತೋರು, ತಿಮ್ಮನಬೈಲು ಇನ್ನಿತರೆ ಗ್ರಾಮಗಳಲ್ಲಿ ಅಕ್ರಮವಾಗಿ ವಿದ್ಯುತ್ ಅನ್ನು ಜಮೀನಿನ ತಂತಿಬೇಲಿ ಗಳಿಗೆ ರಾತ್ರಿವೇಳೆ ಹರಿಸಲಾಗುತ್ತಿದೆ. ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದರಡು ತಿಂಗಳಲ್ಲಿ ಜನರು ಕೂಡಾ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ವನ್ಯಜೀವಿಗಳು ಕೂಡಾ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿವೆ. ಕಾಡುಹಂದಿ, ಜಿಂಕೆ, ನವಿಲು, ಮೊಲ, ಕಡವೆ ಇನ್ನೂ ಅನೇಕ ಜೀವಿಗಳು ವಿದ್ಯುತ್ ಸ್ಪರ್ಶದಿಂದ ದಿನೇ ದಿನೇ ಸಾಯುತ್ತಿವೆ. ಈ ಬಗ್ಗೆ ಅನೇಕ ಸಲ ದೂರು ನೀಡಿದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ ಎಂದು ತಣಿಗೆಬೈಲು, ನಂದಿಬಟ್ಟಲು, ಜಯಪುರ, ಮಂಚೆತೋರು, ತಿಮ್ಮನ ಬೈಲು ಇನ್ನಿತರೆ ಗ್ರಾಮಗಳ ಗ್ರಾಮಾ ರಣ್ಯ ಸಮಿತಿಗಳ ಮುಖಂಡರು ದೂರಿ ದ್ದಾರೆ.
ಗಾಢ ನಿದ್ರೆಯಲ್ಲಿ ಮೆಸ್ಕಾಂ:
ಈ ಭಾಗದಲ್ಲಿ ವಿದ್ಯುತ್ ಸೋರಿಕೆ ಮತ್ತು ವಿದ್ಯುತ್ ಕಳವು ಹೆಚ್ಚಾಗುತ್ತಿದೆ. ಆದರೂ ಮೆಸ್ಕಾಂ ಮಾತ್ರ ಗಾಢನಿದ್ರೆಯಲ್ಲಿದೆ. ವಿದ್ಯುತ್ ಕಳವು ತಡೆಯಲು ಮೆಸ್ಕಾಂ ಗಸ್ತುಪಡೆ ಇದ್ದು, ಮಾಹಿತಿ ನೀಡಿದರೂ ಕೂಡಾ ಯಾವುದೇ ಪ್ರಯೋಜವಾಗುತ್ತಿಲ್ಲ. ಸಾಕಷ್ಟು ಹೊಲ ಜಮೀನುಗಳಿಗೆ ಮೋಟಾರುಗಳಿಗೆ ವಿದ್ಯುತ್ಅನ್ನು ಅಕ್ರಮವಾಗಿ ಹಾಕಿಕೊಳ್ಳಲಾಗುತ್ತಿದೆ. ಈ ಬಗ್ಗೆ ಯಾವೊಬ್ಬ ಮೆಸ್ಕಾಂ ಅಧಿಕಾರಿಯು ಕೂಡಾ ತಲೆಗೆಡಿಸಿ ಕೊಳ್ಳದೇ ಇರುವುದರಿಂದ ಇಲ್ಲಿ ಸಾಕಷ್ಟು ಜೀವಿಗಳು ಸಾವನಪ್ಪಿವೆ.
ಭದ್ರಾವನ್ಯಜೀವಿ ವಿಭಾಗದ ತಣಿಗೆಬೈಲು ವಲಯದ ಅರಣ್ಯಾಧಿ ಕಾರಿಗಳು ಹಾಗೂ ಸಿಬ್ಬಂದಿ ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು.
ಇನ್ನೂ ದೊಡ್ಡ ವನ್ಯಜೀವಿಗಳು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವನ್ನಪ್ಪುವ ಮೊದಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ದೊಡ್ಡ ಗಂಡಾನೆ ವಿದ್ಯುತ್ ತಂತಿಬೇಲಿಗೆ ಸಿಲುಕಿ ಮೃತಪಟ್ಟ ನಿದರ್ಶನವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.