ಗಂಗಾವತಿ: ಮುಗಿದು ಹೋಗುವ (ನವೀಕರಿಸಲಾಗದ) ಸಂಪನ್ಮೂಲಗಳಲ್ಲಿ ವಿದ್ಯುತ್ ಅತ್ಯಂತ ಮುಖ್ಯವಾಗಿದೆ. ವಿದ್ಯುತ್ ಉತ್ಪಾದನೆಗೆ ಪರಮಾಣು ಬಳಕೆ ಅತ್ಯುತ್ತಮ ಪರ್ಯಾಯವಾಗಬಲ್ಲದು ಎಂದು ಬೆಂಗಳೂರಿನ ಕನ್ನಡ ಗಣಕ ಪರಿಷತ್ತಿನ ಸದಸ್ಯ ಜಿ.ಎನ್. ನರಸಿಂಹಮೂರ್ತಿ ಹೇಳಿದರು.
ನಗರದ ವೈದ್ಯಕೀಯ ಭವನದಲ್ಲಿ ಶುಕ್ರವಾರ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಬೆಂಗಳೂರು, ಗುಲ್ಬರ್ಗದ ಡಾ.ಪಿ.ಎಸ್. ಶಂಕರ್ ಪ್ರತಿಷ್ಠಾನ ಮತ್ತು ಸ್ಥಳೀಯ ಎಚ್ಆರ್ಎಸ್ಎಂ ಕಾಲೇಜಿನ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ-2012 ಹಮ್ಮಿಕೊಳ್ಳಲಾಗಿತ್ತು.
ದಿನಾಚರಣೆಯಲ್ಲಿ ಪಾಲ್ಗೊಂಡ ನರಸಿಂಹಮೂರ್ತಿ, `ಪರಮಾಣು ಶಕ್ತಿಯ ಬಳಕೆ ಮತ್ತು ಸುರಕ್ಷತೆ~ ಎಂಬ ವಿಷಯದ ಬಗ್ಗೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಜೆಕ್ಟರ್ ಮೂಲಕ ಚಿತ್ರ ಸಹಿತ ವಿವರಣೆಯ ಉಪನ್ಯಾಸ ನೀಡಿದರು.
ವಿದ್ಯುತ್ ಉತ್ಪಾದನೆಗೆ ಬಳಕೆಯಾಗುವ ನೀರು, ಕಲ್ಲಿದ್ದಲು ಮತ್ತಿತರ ಸಂಪನ್ಮೂಲ ಮುಂದಿನ ದಿನಗಳಲ್ಲಿ ಮುಗಿದು ಹೋಗುತ್ತವೆ. ಸೂರ್ಯನ ಶಾಖದಿಂದ ಪರ್ಯಾಯ ವಿದ್ಯುತ್ ಪಡೆಯಲು ಸಾಧ್ಯವಿದ್ದರೂ ಕೂಡ ನಿರೀಕ್ಷಿತ ಯಶಸ್ಸು ಸಾಧಿಸಲಾಗುತ್ತಿಲ್ಲ.
ಆದರೆ ಪರಮಾಣು ಮಾತ್ರ ಭವಿಷ್ಯದ ಪರ್ಯಾಯ ಶಕ್ತಿಯಾಗುತ್ತದೆ. ಆದರೆ ಅದನ್ನು ಅತಿ ಜಾಗೂರಕತೆಯಿಂದ ಬಳಸಿದ್ದಲ್ಲಿ ಮಾತ್ರ ವರವಾಗಲಿದೆ. ಇಲ್ಲವಾದಲ್ಲಿ ವಿಕಿರಣಗಳು ಮಾನವ ಜನಾಂಗಕ್ಕೆ ಮಾರಕವಾಗಲಿವೆ ಎಂದು ಎಚ್ಚರಿಸಿದರು.
ವಿಜ್ಞಾನ ಲೇಖಕ, ಸಾಫ್ಟ್ವೇರ್ ತಜ್ಞ ಟಿ.ಜಿ. ಶ್ರೀನಿಧಿ, `ಸ್ವಚ್ಛ ಇಂಧನ ಇಂದು-ಮುಂದು~ ಎಂಬ ವಿಷಯದ ಮೇಲೆ ವಿವರಣಾತ್ಮಕ ಉಪನ್ಯಾಸ ನೀಡಿದರು. ಕಲ್ಲಿದ್ದಲ್ಲಿನ ಬದಲಿಗೆ ವಿದ್ಯುತ್ ಉತ್ಪಾದನೆಗೆ ನೀರು, ಗಾಳಿ, ಸೂರ್ಯ ಮತ್ತು ಸಮುದ್ರದ ಅಲೆ ಬಳಸಿಕೊಳ್ಳಬಹುದು.
ಮುಗಿದು ಹೋಗುವ ಅಥವಾ ಪಳೆಯುಳಿಕೆ ಸಂಪನ್ಮೂಲಗಳು ಪರಿಸರಕ್ಕೆ ಮಾರಕ. ಅವು ಅತಿ ಮಾಲಿನ್ಯ ಉಂಟು ಮಾಡುತ್ತಿವೆ. ಅವುಗಳ ಮೇಲಿನ ಅತಿ ಅವಲಂಬನೆ ಮುಂದೊಂದು ದಿನ ಜನಜೀವನವನ್ನು ಸ್ತಬ್ಧವಾಗಿಸಲಿದೆ ಎಂದು ಎಚ್ಚರಿಸಿದರು.
ಡಾ. ಚಂದ್ರಪ್ಪ ಉದ್ಘಾಟಿಸಿದರು. ವೈದ್ಯ ಎ. ಸೋಮರಾಜು ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಿ.ಸಿ. ಐಗೋಳ, ಡಾ. ಶಿವಾನಂದ ಭಾವಿಕಟ್ಟಿ ವೇದಿಕೆಯಲ್ಲಿದ್ದರು. ಗ್ರಂಥಪಾಲಕ ಎಸ್.ವಿ. ವಡವಿ. ಪುಟ್ಟಸ್ವಾಮಿ, ಎಫ್.ಎಚ್. ಚಿತ್ರಗಾರ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.