ಮರಿಯಮ್ಮನಹಳ್ಳಿ: ಪ್ರತಿಯೊಬ್ಬರಿಗೂ ವಿದ್ಯೆ ಇದ್ದರೆ ಸಾಲದು, ವಿದ್ಯೆ ಜತೆಗೆ ಸಂಸ್ಕಾರ ರೂಢಿಸಿಕೊಳ್ಳುವುದರ ಜತೆಗೆ ಬಡಜನರ ಬಗ್ಗೆ ಸ್ಪಂದನೆ, ಗುರುಹಿರಿಯರಲ್ಲಿ ಭಯಭಕ್ತಿ ಹೊಂದಬೇಕು. ಇದು ಮೂಡುವದು ವಿದ್ಯೆಯಿಂದ ಮಾತ್ರ ಎಂದು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ. ಕೊಟ್ರಪ್ಪ ಸಲಹೆ ನೀಡಿದರು.
ಅವರು ಪಟ್ಟಣದ ಸಪ್ತಗರಿ ವಿದ್ಯಾ ಸಂಸ್ಥೆ ದುರ್ಗಾದಾಸ ಕಲಾಮಂದಿರಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀಸಾಯಿ ಪ್ರೌಢ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದ್ಯೆಯು ಪ್ರತಿಯೊಬ್ಬರನ್ನೂ ವಿನಶೀಲರನ್ನಾಗಿಸುವುದರ ಜತೆಗೆ ಮುಖ್ಯವಾಗಿ ಜೀವನದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಬೆಳಸಿಕೊಳ್ಳಬೇಕಾಗಿದೆ. ಅಲ್ಲದೆ ಕನ್ನಡ ನಾಡು ನುಡಿ ಮರೆತರೆ ತಾಯಿಯನ್ನು ಮರೆತಂತೆ. ಕನ್ನಡದ ಬಗ್ಗೆ ಆದ್ಯತೆ ನೀಡುವದರ ಜತೆಗೆ ಆಂಗ್ಲ ಭಾಷೆ ಜ್ಞಾನ, ತಂತ್ರಜ್ಞಾನಕ್ಕೆ ಬಳಸಿಕೊಳ್ಳಿ. ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು ಎಂದರು.
`ಸುಧಾ~ ವಾರಪತ್ರಿಕೆಯ ಸಹಾಯಕ ಸಂಪಾದಕ ಗುಡಿಹಳ್ಳಿ ನಾಗರಾಜ್, ಹಿಂದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುವದು ಕಷ್ಟಕರವಾಗಿತ್ತು. ಆದರೆ ಈಗ ಒಳ್ಳೆಯ ಶಿಕ್ಷಣ, ಭವಿಷ್ಯ ಮಕ್ಕಳಿಗೆ ದೊರೆಯುತ್ತಿದೆ. ಮಕ್ಕಳು ಪಠ್ಯದ ಜತಗೆ ಪಠ್ಯೇತರ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ಉದ್ಯೋಗಕ್ಕೆ ಇಂಗ್ಲಿಷ್ ಬಳಸಿಕೊಂಡು, ಕನ್ನಡವನ್ನು ಜೀವನವಾಗಿರಿಸಿಕೊಳ್ಳಿ ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಬಿ.ಶಂಕ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಪ್ತಗಿರಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪಾಲ್ತೂರ್ ನಾಗರಾಜ್, ಸಂಸ್ಥೆಯ ಅಧ್ಯಕ್ಷೆ ಲತಾ ಅರುಣ್ಕುಮಾರ್, ಕಾರ್ಯದರ್ಶಿ ಅರುಣ್ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಹಾಗೂ ಹೆಚ್ಚು ಅಂಕಗಳನ್ನು ಗಳಿಸಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೆ ಮಕ್ಕಳಿಂದ ನೃತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.