ಬೆಂಗಳೂರು: ‘ದೇವಾಡಿಗ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳು ಅಭಿವೃದ್ಧಿಯಾಗಬೇಕಾದರೆ ಸಮಾಜದ ಮಕ್ಕಳು ಉತ್ತಮ ವಿದ್ಯೆ ಪಡೆಯುವಂತಾಗಬೇಕು. ವಿದ್ಯೆಯ ಬಲದಿಂದಲೇ ಮುಂದಿನ ಜನಾಂಗ ಉತ್ತಮ ಮಟ್ಟಕ್ಕೆ ತಲುಪಲು ಸಾಧ್ಯವಾಗುತ್ತದೆ’ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ದೇವಾಡಿಗ ಸಂಘವು ಈಚೆಗೆ ಆಯೋಜಿಸಿದ್ದ ‘ದೇವಾಡಿಗ ಸಂಗಮ ಸಮ್ಮೇಳನ’ವನ್ನು ಉದ್ಘಾಟಿಸಿದ ಅವರು, ‘ಉತ್ತಮ ಜೀವನಕ್ಕೆ ಶಿಕ್ಷಣ ಭದ್ರ ಬುನಾದಿ. ಕಠಿಣ ಪರಿಶ್ರಮ ಹಾಗೂ ಇಚ್ಛಾ ಶಕ್ತಿ ಇದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.
ನರರೋಗ ತಜ್ಞ ಡಾ. ಕೆ.ವಿ. ದೇವಾಡಿಗ ಅವರು ವಿಚಾರಗೋಷ್ಠಿಗೆ ಚಾಲನೆ ನೀಡಿದರು. ಡಾ.ಕೆ.ದೇವರಾಜ್, ಎಚ್.ಮೋಹನ್ ದಾಸ್, ಆನಂದ ದೇವಾಡಿಗ, ರಜನಿಕಾಂತ್ ಕುಡ್ಪಿ, ಚಂದ್ರು ಮರವಂತೆ ಹಾಗೂ ಇತರರು ಪ್ರಬಂಧ ಮಂಡಿಸಿದರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸುರೇಶ್ ದೇವಾಡಿಗ, ಪೂಜಾ ದೇವಾಡಿಗ, ರವೀಂದ್ರ ದೇವಾಡಿಗ, ದನು ಪ್ರಕಾಶ್ ಅವರಿಗೆ ಸನ್ಮಾನಿಸಲಾಯಿತು. ಸ್ಯಾಕ್ಸೋಫೋನ್ ವಾದಕಿ ಪೂಜಾ ದೇವಾಡಿಗ ಅವರ ಕಾರ್ಯಕ್ರಮ ವಿಶಿಷ್ಟವಾಗಿತ್ತು. ವಿವಿಧ ಪ್ರದೇಶಗಳಿಂದ ಬಂದ ದೇವಾಡಿಗ ಸಮಾಜದ ನೂರಾರು ಜನರು ಭಾಗವಹಿಸಿದ್ದರು. ಶಾಸಕರಾದ ಎನ್.ಸಂಪಂಗಿ, ದೇವಾಡಿಗ ಸಂಘದ ಅಧ್ಯಕ್ಷ ರಘು ಶೇರಿಗಾರ, ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.