ಚಿಕ್ಕಮಗಳೂರು: ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಅಭಿಮಾನ, ಪ್ರೀತಿ ಮೂಡಿಸುವ ಶಿಕ್ಷಣ ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆಣೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಮೂರು ಶತಮಾನಗಳ ಹಿಂದೆಯೇ ನಮ್ಮ ದೇಶಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಭಾರತದಲ್ಲಿ ಅಪಾರ ವಿದ್ಯಾವಂತರಿದ್ದಾರೆ ಎಂದಿದ್ದರು. ವೇದಗಳಲ್ಲಿ ವಿಮಾನ ತಯಾರಿಸುವುದು ಹೇಗೆ ಎಂಬುದನ್ನು ಬರೆಯಲಾಗಿದೆ.
ವಿಮಾನ ಕಂಡು ಹಿಡಿದವರು ರೈಟ್ ಬ್ರದರ್ಸ್ ಎನ್ನಲಾಗುತ್ತಿದೆ. ಆದರೆ 4 ಸಾವಿರ ವರ್ಷಗಳ ಮೊದಲೇ ಅಗಡಿ ಎಂಬ ಕನ್ನಡಿಗ ಅದನ್ನು ಕಂಡು ಹಿಡಿದಿದ್ದರು ಎಂದರು.
50 ವರ್ಷಗಳ ಹಿಂದೆ ಗ್ರಾಮಸ್ಥರ ಶ್ರಮದಾನದಿಂದ ಆರಂಭಗೊಂಡ ಶಾಲೆಯಲ್ಲಿ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾ ಡಿದ್ದು, ಅವರಲ್ಲಿ ನೂರಾರು ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಗ್ರಾಮಸ್ಥ ಎ.ಟಿ.ರಮೇಶ್ ತಿಳಿಸಿದರು.
ಗ್ರಾಮದ ಮುಖಂಡ ಎಚ್.ಡಿ.ರಾಮೇಗೌಡ ಶಾಲೆ ನಡೆದು ಬಂದ ಹಾದಿ ವಿವರಿಸಿದರು. ಸಮಾರಂಭಕ್ಕೆ ಮೊದಲು ಶಾಲೆಯ ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರ ಕ್ರೀಡಾಕೂಟವನ್ನು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಉದ್ಘಾಟಿಸಿದರು.
ತಹಸೀಲ್ದಾರ್ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ನಾಗೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಶಿಕ್ಷಣಾಧಿಕಾರಿ ದೊಡ್ಡಮಲ್ಲಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಗಂಗಾಧರ್, ಗ್ರಾಮದ ಹಿರಿಯರಾದ ಅತ್ತಿಕಟ್ಟೆ ಜಗನ್ನಾಥ್, ಎಚ್.ಎಂ.ನಿಂಗೇಗೌಡ, ಎಚ್.ಬಿ.ಗಿಡ್ಡೇಗೌಡ, ಜಿ.ಎನ್.ರಮೇಶ್, ಪ್ರಭಾರ ಮುಖ್ಯ ಶಿಕ್ಷಕ ಸೋಮಶೇಖರ್, ಶಿಕ್ಷಕರಾದ ರಂಗಸ್ವಾಮಿ, ಬಸವೇಗೌಡ ಇದ್ದರು.