ಜಾಲಹಳ್ಳಿ: ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿರುವ ವಿಧವಾ, ವೃದ್ಧಾಪ್ಯ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆಯಡಿ ಮುಂಜೂರಾದ ಮಾಸಿಕ ವೇತನಗಳನ್ನು ಪುನಃ ಮಂಜೂರು ಮಾಡಲು ಒತ್ತಾಯಿಸಿ ಮಂಗಳವಾರ ಪಟ್ಟಣದ ರಂಗನಾಥ ದೇವಸ್ಥಾನದ ಆವರಣದಲ್ಲಿ ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಹಬೀಬುರ್ ರೆಹಮಾನ್ ಸ್ಥಗಿತಗೊಂಡ ಎಲ್ಲ ಮಾಸಾಶನಗಳನ್ನು ಮತ್ತೆ ನವೀಕರಣಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ನೆಮ್ಮದಿ ಕೇಂದ್ರದಲ್ಲಿ ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಹೊಸ ಅರ್ಜಿಗಳನ್ನು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷರಾದ ಕೆ. ಕರಿಯಪ್ಪ, ಗ್ರಾಮಲೆಕ್ಕಧಿಕಾರಿ ದೇವರೆಡ್ಡಿ, ಸಂಘಟನೆಯ ಮುಖಂಡರಾದ ಜನವಾದಿ ಮಹಿಳಾ ಸಂಘಟನೆ ಮುಖಂಡರಾದ ಸರಸ್ವತಿ ಹಟ್ಟಿ, ವಿಜಯಲಕ್ಷ್ಮಿ, ಗ್ರಾ.ಪಂ ಸದಸ್ಯ ತಿಪ್ಪಯ್ಯ ನಾಯಕ, ಚಂದ್ರಶೇಖರ್ ಚಿಂಚೋಡಿ, ರಂಗನಾಥ ಬಿ.ಆರ್ ಗುಂಡ, ಆಯ್ಯಳಪ್ಪ ನಿಲವಂಜಿ, ನರಸಣ್ಣ ನಾಯಕ, ಗಿರಿಯಪ್ಪ ಪೂಜಾರಿ ಉಪಸ್ಥಿತರಿದ್ದರು.