ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ 11 ಶಾಸಕರು ವಿಧಾನಸೌಧದಲ್ಲಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಮಾಣ ವಚನ ಬೋಧಿಸಿದರು.
ಪರಿಷತ್ತಿಗೆ ಇದೇ 11ರಂದು ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ವಿಮಲಾ ಗೌಡ, ರಘುನಾಥರಾವ್ ಮಲ್ಕಾಪುರೆ, ಬಿ.ಜೆ. ಪುಟ್ಟಸ್ವಾಮಿ, ಭಾನುಪ್ರಕಾಶ್, ಸೋಮಣ್ಣ ಬೇವಿನಮರದ, ಡಿ.ಎಸ್. ವೀರಯ್ಯ, ಕಾಂಗ್ರೆಸ್ನ ಮೋಟಮ್ಮ, ಕೆ. ಗೋವಿಂದರಾಜು, ಎಂ.ಆರ್. ಸೀತಾರಾಂ, ಜೆಡಿಎಸ್ನ ಸೈಯದ್ ಮುದೀರ್ ಆಗಾ ಹಾಗೂ ಪಕ್ಷೇತರ ಶಾಸಕ ಬಿ.ಎಸ್. ಸುರೇಶ್ ಪ್ರಮಾಣ ವಚನ ಸ್ವೀಕರಿಸಿದರು.
ಭಾನುಪ್ರಕಾಶ್ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದ ಎಲ್ಲ ಅಭ್ಯರ್ಥಿಗಳೂ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ಕುಮಾರ್, ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.