ಬೆಂಗಳೂರು: ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕ್ಗೆ ಕಾರು ಗುದ್ದಿಸಿದ ವಿಧಾನಪರಿಷತ್ ಸದಸ್ಯ ಬಿಜೆಪಿಯ ಲೆಹರ್ಸಿಂಗ್ ಅವರ ಪುತ್ರ ದೀಪಕ್ಕುಮಾರ್ ಮೇಲೆ ಬೈಕ್ ಸವಾರ ಹಲ್ಲೆ ನಡೆಸಿದ ಘಟನೆ ಸಂಜಯನಗರದ ದೇವಸಂದ್ರ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಈ ಸಂಬಂಧ ದೀಪಕ್ಕುಮಾರ್ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸಂಜಯನಗರ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡು ಬೈಕ್ ಸವಾರ ನಾಗೇಶ್ (28) ಎಂಬುವರನ್ನು ಬಂಧಿಸಿದ್ದಾರೆ.
ವಿದ್ಯಾರಣ್ಯಪುರ ನಿವಾಸಿಯಾದ ನಾಗೇಶ್, ತಾಯಿಯ ಜತೆ ಬೆಳಿಗ್ಗೆ ಬೈಕ್ನಲ್ಲಿ ಬಿಇಎಲ್ ರಸ್ತೆಯಲ್ಲಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಸಮೀಪದ ಅಡ್ಡರಸ್ತೆಯೊಂದರಲ್ಲಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ದೀಪಕ್ಕುಮಾರ್ ಬಿಇಎಲ್ ರಸ್ತೆಗೆ ತಿರುವು ಪಡೆದುಕೊಳ್ಳುವ ಯತ್ನದಲ್ಲಿ ನಾಗೇಶ್ ಅವರ ಬೈಕ್ಗೆ ಕಾರನ್ನು ಗುದ್ದಿಸಿದರು.
ನಂತರ ಈ ವಿಷಯವಾಗಿ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು ನಾಗೇಶ್, ದೀಪಕ್ಕುಮಾರ್ ತಲೆಗೆ ಹೆಲ್ಮೆಟ್ನಿಂದ ಹೊಡೆದರು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ನಾಗೇಶ್ ಅವರ ಬೈಕ್ ಜಖಂಗೊಂಡಿದೆ ಮತ್ತು ಅವರ ತಾಯಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.