ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಪ್ರತಿಪಕ್ಷಗಳ ಹಗಲುಗನಸು

Last Updated 5 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಯಾದಗಿರಿ: ವಿಧಾನಸಭೆಗೆ ಚುನಾವಣೆ ಬರಲಿದೆ ಎಂಬ ವಿರೋಧ ಪಕ್ಷಗಳ ಹಗಲುಗನಸು ನನಸಾಗುವುದಿಲ್ಲ. ಅದರ ಬದಲು ಭ್ರಷ್ಟಾಚಾರ, ಜನರ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರವೇ ಅಧಿಕಾರ ಕಳೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಾಥರಾವ ಮಲ್ಕಾಪುರೆ ಹೇಳಿದರು. ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಳ್ಳಾರಿ, ಗುಲ್ಬರ್ಗ ವಿಭಾಗಗಳ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನಸಭೆಯ ಬದಲು ಲೋಕಸಭೆಯ ಚುನಾವಣೆಗಳು ಮೊದಲು ಬರಲಿದ್ದು, ಪಕ್ಷ ಎಲ್ಲ ರೀತಿಯಿಂದಲೂ ಸನ್ನದ್ಧವಾಗಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ಹೇಳಿದರು. ಬಿಜೆಪಿ ಸರ್ಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ‘ಮತದಾರರಿಗೆ ವಂದನೆ: ಕಾರ್ಯಕರ್ತರಿಗೆ ಅಭಿನಂದನೆ’ ಎಂಬ ಸಮಾವೇಶವನ್ನು ಫೆ.20 ರಂದು ಬೆಂಗಳೂರಿನಲ್ಲಿ ಹಮ್ಮಿ ಕೊಳ್ಳಲಾಗುತ್ತಿದೆ. ಅಲ್ಲದೇ ಫೆ.11 ರವರೆಗೆ ವಿಶೇಷ ಅಭಿಯಾನ ಏರ್ಪಡಿಸಲಾಗಿದ್ದು, ಎಲ್ಲ ರೀತಿಯ ವಿಚಾರಗಳ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಈ ರೀತಿಯ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ ನಿರ್ಮಲಕುಮಾರ ಸುರಾನಾ, ಎಚ್‌ಕೆ ಡಿಬಿ ಅಧ್ಯಕ್ಷ ಅಮರನಾಥ ಪಾಟೀಲ, ಎಂಎಸ್‌ಐಎಲ್ ಅಧ್ಯಕ್ಷ ವಿಕ್ರಮ್ ಪಾಟೀಲ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೀರಬಸವಂತರೆಡ್ಡಿ ಮುದ್ನಾಳ, ಬಿಜೆಪಿ ಜಿಲ್ಲಾ ಉಸ್ತುವಾರಿ ಎನ್. ಶಂಕ್ರಪ್ಪ, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ಶಾಸಕ ನರಸಿಂಹ ನಾಯಕ (ರಾಜುಗೌಡ), ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಾಗರತ್ನಾ ಕುಪ್ಪಿ, ಮಹಿಳಾ ಮೋರ್ಚಾ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲಾ ಭೀಮರಾಯ, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸುನೀತಾ ಚವ್ಹಾಣ ಮುಂತಾದವರು ವೇದಿಕೆಯಲ್ಲಿದ್ದರು.

ಪ್ರತಿಪಕ್ಷಗಳ ಕಚೇರಿಯಾದ ರಾಜಭವನ: ಆಕ್ರೋಶ

ಯಾದಗಿರಿ: ಜನಪರ ಆಡಳಿತ ನೀಡು ತ್ತಿರುವ ರಾಜ್ಯದ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷಗಳು ಷಡ್ಯಂತ್ರ ಮಾಡುತ್ತಿವೆ. ರಾಜಭವನವು ಪ್ರತಿಪಕ್ಷಗಳ ಕಚೇರಿಯಂತಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಘುನಾಥ ರಾವ ಮಲ್ಕಾಪುರೆ ಆಕ್ರೋಶ ವ್ಯಕ್ತಪಡಿಸಿದರು. ನಗರದ ವಿದ್ಯಾ ಮಂಗಲ ಕಾರ್ಯಾ ಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಗುಲ್ಬರ್ಗ, ಬಳ್ಳಾರಿ ವಿಭಾಗಗಳ ಬಿಜೆಪಿ ಶಕ್ತಿ ಕೇಂದ್ರಗಳ ಪ್ರಮುಖ ಕಾರ್ಯ ಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಪಕ್ಷಗಳ ನಾಯಕರು ರಾಜ ಭವನಕ್ಕೆ ಭೇಟಿ ನೀಡಿದಷ್ಟು ತಮ್ಮ ಕ್ಷೇತ್ರಗಳಿಗೆ ಹೋಗುತ್ತಿಲ್ಲ.ತಮ್ಮ ಕ್ಷೇತ್ರಗಳಿಗಾದರೂ ಭೇಟಿ ನೀಡಿದ್ದರೆ, ಜನರ ಸಂಕಷ್ಟವನ್ನು ಪರಿಹರಿಸಬಹುದಿತ್ತು. ಆದರೆ ರಾಜಭವನವನ್ನೇ ತಮ್ಮ ಕಚೇರಿಯಾಗಿ ಮಾಡಿಕೊಂಡು ರಾಜ್ಯದ ಬಿಜೆಪಿ ಸರ್ಕಾರವನ್ನು ಹೇಗಾದರೂ ಮಾಡಿ ಅಸ್ಥಿರಗೊಳಿಸಬೇಕು ಎಂಬ ಯೋಜನೆ ರೂಪಿಸುತ್ತಿವೆ. ರಾಜ್ಯಪಾಲರೂ ಕೂಡ ಪ್ರತಿಪಕ್ಷಗಳ ನಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರದ ಯುಪಿಎ ಸರ್ಕಾರ ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಹುಳುಕು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿವೆ ಎಂದು ಟೀಕಿಸಿದರು. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾ ಯಿತಿ, ತಾಲ್ಲೂಕು ಪಂಚಾಯಿತಿ ಚುನಾ ವಣೆಗಳಲ್ಲಿ ಜನರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.ರಾಜ್ಯದ 18 ಜಿಲ್ಲಾ ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ.

ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳದ ಪ್ರತಿಪಕ್ಷಗಳು ಚುನಾವಣೆ ಎದುರಿಸಿದಲ್ಲಿ ಮಣ್ಣು ಮುಕ್ಕುವುದು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು. ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ನಿಜ ವಾಗಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ದೇವೇಗೌಡರೇ ನಾಯಕರು. ಏಕೆಂದರೆ ಕಾಂಗ್ರೆಸ್ ನಲ್ಲಿರುವ ಬಹುತೇಕ ನಾಯಕರು ಜೆಡಿಎಸ್‌ನಿಂದ ಬಂದವರೇ ಆಗಿದ್ದಾರೆ. ಬಿಜೆಪಿಗೆ ತನ್ನದೇ ಆದ ತತ್ವ ಸಿದ್ಧಾಂತಗಳಿದ್ದು, ಬೇರೆಯವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ಇಲ್ಲ ಎಂದರು.

ರಾಜ್ಯಪಾಲರ ಹುದ್ದೆಯ ಘನತೆ ಯನ್ನು ಗಾಳಿಗೆ ತೂರಲಾಗಿದೆ. ತಮ್ಮ ಕ್ಷೇತ್ರಗಳಿಗೆ ಹೋಗದ ಪ್ರತಿಪಕ್ಷದ ನಾಯಕರು ರಾಜ್ಯಪಾಲರ ಕಚೇರಿಗೆ ಹೋಗುತ್ತಿದ್ದಾರೆ.ಇದರರ್ಥ ಬಿಜೆಪಿ ಸರ್ಕಾರದ ಸಾಧನೆಗಳು ಇವರಿಗೆ ಸಹಿ ಸಲು ಆಗುತ್ತಿಲ್ಲ ಎಂದು ಅವರು ಟೀಕಿಸಿದರು. ರಾಜ್ಯದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿವೆ. ಈಗಾಗಲೇ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಲಾಗಿದೆ. ನಿಮಗ- ಮಂಡಳಿಗಳ ಸದಸ್ಯರನ್ನು ನೇಮಕ ಮಾಡಿದಲ್ಲಿ ರಾಜ್ಯದ ಸಾವಿರಕ್ಕೂ ಹೆಚ್ಚು ಕಾರ್ಯ ಕರ್ತರಿಗೆ ಅಧಿಕಾರ ಸಿಗಲಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಯೋಚನೆ ಮಾಡಬೇಕು ಎಂದು ಸಲಹೆ ಮಾಡಿದರು.

ನಂತರ ನಡೆದ ಚರ್ಚಾಗೋಷ್ಠಿ ಯಲ್ಲಿ ಐದಾರು ತಂಡಗಳನ್ನು ಮಾಡಿ, ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಲಾಯಿತು. ರಾಯಚೂರು, ಗುಲ್ಬರ್ಗ, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಶಕ್ತಿ ಕೇಂದ್ರಗಳ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ನೀಲಕಂಠರಾಯ ಯಲ್ಹೇರಿ ನಿರೂ ಪಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೀರಬಸವಂತರೆಡ್ಡಿ ಮುದ್ನಾಳ ಸ್ವಾಗತಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ಧಾರೆಡ್ಡಿ ಬಲಕಲ್, ಜಿಲ್ಲಾ ಘಟಕದ ಪ್ರಧಾನ ಕಾರ್ಯ ದರ್ಶಿ ದೇವಿಂದ್ರನಾಥ ನಾದ್, ಉಪಾ ಧ್ಯಕ್ಷ ಬಸವರಾಜ ಪಾಟೀಲ ಬಿಳ್ಹಾರ, ಜಿ.ಪಂ. ಮಾಜಿ ಅಧ್ಯಕ್ಷ ರಾಜಾ ಹನು ಮಪ್ಪ ನಾಯಕ, ಜಿ.ಪಂ. ಸದಸ್ಯರಾದ ಬಸವರಾಜ ಖಂಡ್ರೆ ಅಬ್ಬೆತುಮಕೂರು, ದೇವರಾಜ ನಾಯಕ, ಮಹೇಂದ್ರ ಕುಮಾರ, ವೆಂಕಟರೆಡ್ಡಿ ಅಬ್ಬೆತುಮ ಕೂರ, ನಗರ ಘಟಕದ ಅಧ್ಯಕ್ಷ ನಿಂಗಪ್ಪ ಹತ್ತಿಮನಿ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT