ನವದೆಹಲಿ: ಹಾವೇರಿಯಲ್ಲಿ ನಡೆದ ಕೆಜೆಪಿ ರ್ಯಾಲಿಯಲ್ಲಿ ಮಂತ್ರಿಯೊಬ್ಬರು ಸೇರಿ 14 ಶಾಸಕರು ಭಾಗವಹಿಸ್ದ್ದಿದನ್ನು ಬಿಜೆಪಿ ಹೈಕಮಾಂಡ್ ತೀವ್ರವಾಗಿ ಪರಿಗಣಿಸಿದೆ. ಬಿಜೆಪಿ ರಾಜ್ಯ ಘಟಕದಿಂದ ಪ್ರಸ್ತಾವನೆ ಬಂದರೆ ಕರ್ನಾಟಕ ವಿಧಾನಸಭೆ ವಿಸರ್ಜನೆಯನ್ನು ಅನುಮೋದಿಸಲು ಬಿಜೆಪಿ ಕೇಂದ್ರ ಮುಖಂಡರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ.
`ವಿಧಾನಸಭೆ ವಿಸರ್ಜಿಸುವಂತೆ ಹೈಕಮಾಂಡ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನೇರವಾಗಿ ಸೂಚನೆ ನೀಡುವುದಿಲ್ಲ. ಒಂದು ವೇಳೆ ಸ್ವತಃ ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಘಟಕ ಶಿಫಾರಸು ಮಾಡುವುದಾದರೆ ನಮ್ಮ ಸಮ್ಮತಿ ಇದೆ' ಎಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ ಎನ್ನಲಾಗಿದೆ.
ಆದರೆ ಸಾರ್ವಜನಿಕವಾಗಿ ಮುಖ ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಶಾಸಕರೂ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ ಬಿಜೆಪಿಯ ಎಲ್ಲಾ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ.