ಹಾವೇರಿ : `ನಿಮಗೆ ಧ್ಯೆರ್ಯ ಇದ್ದರೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಬನ್ನಿ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಇಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಉದ್ಘಾಟನಾ ಸಮಾವೇಶದಲ್ಲಿ ಬಿಜೆಪಿ ಸರ್ಕಾರಕ್ಕೆ ನೇರವಾಗಿ ಸವಾಲು ಎಸೆದರು.
ಬೃಹತ್ ಸಮಾವೇಶದಲ್ಲಿ ನೂತನವಾಗಿ ಚಾಲನೆಗೊಂಡ ಕೆಜೆಪಿ ಪಕ್ಷದ ಅಧ್ಯಕ್ಷರಾಗಿ ಯಡಿಯೂರಪ್ಪ ಇಲ್ಲಿ ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, `ಪ್ರಸ್ತುತ ಬಿಜೆಪಿ ಸರ್ಕಾರವು ನನ್ನ ಬೆಂಬಲಿಗರ ಸಹಾಯದಿಂದಲೇ ನಡೆಯುತ್ತಿದ್ದು, ಅದೊಂದು ಕೆಜೆಪಿ ಮತ್ತು ಬಿಜೆಪಿ ಪಕ್ಷಗಳ ಸಮ್ಮಿಶ್ರ ಸರ್ಕಾರವಾಗಿದೆ.
ನನ್ನ ಬೆಂಬಲಿಗರಿಂದಲೇ ಶೆಟ್ಟರ್ ಸರ್ಕಾರ ಉಳಿದಿರುವುದು ಇದನ್ನು ಅವರು ತಿಳಿದುಕೊಳ್ಳಬೇಕು. ಸರ್ಕಾರವು ತನ್ನ ಆಡಳಿತ ಅವಧಿಯನ್ನು ಮುಗಿಸಬೇಕಾದರೇ ತಮ್ಮ ಬೆಂಬಲಿಗರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳಬಾರದು' ಎಂದು ಅವರು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಕೆಜೆಪಿ ಸಮಾವೇಶದಿಂದ ಹೊರಗುಳಿಯುವಂತೆ ಬಿಜೆಪಿ ಶಾಸಕರಿಗೆ ಬಿಜೆಪಿ ಪಕ್ಷದ ಅಧ್ಯಕ್ಷರು ಎಚ್ಚರಿಕೆಯನ್ನು ನೀಡಿದ್ದರೂ ಇಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ 10ಕ್ಕೂ ಅಧಿಕ ಶಾಸಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇವರೊಂದಿಗೆ ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷವನ್ನು ತೊರೆದ ನಟಿ ಪೂಜಾಗಾಂಧಿ ಹಾಗೂ ನಟ ದೊಡ್ಡಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.