ಬೆಂಗಳೂರು: ‘ಅಳಿಯ ಆರ್.ವಿನೀಲ್ ಕೃಷ್ಣ ಅವರನ್ನು ನಕ್ಸಲರು ಬಿಡುಗಡೆ ಮಾಡಿರುವುದು ಕುಟುಂಬ ಸದಸ್ಯರಲ್ಲಿ ಸಂತಸ ಮೂಡಿಸಿದೆ’ ಎಂದು ಕೃಷ್ಣ ಅವರ ಮಾವ ಎಸ್.ಕೆ.ವೇಣುಗೋಪಾಲ್ ಹರ್ಷ ವ್ಯಕ್ತಪಡಿಸಿದರು.
ನಗರದ ಎಚ್ಎಸ್ಆರ್ ಲೇಔಟ್ನಲ್ಲಿ ನೆಲೆಸಿರುವ ನಿವೃತ್ತ ಐಪಿಎಸ್ ಅಧಿಕಾರಿಯಾದ ವೇಣುಗೋಪಾಲ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ನಕ್ಸಲರು ಕೃಷ್ಣ ಅವರನ್ನು ಅಪಹರಿಸಿದ್ದರಿಂದ ಕುಟುಂಬ ಸದಸ್ಯರು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿದ್ದರು. ನಕ್ಸಲರು ಅವರನ್ನು ಬಿಡುಗಡೆಗೊಳಿಸಿದ ವಿಷಯ ಖಾತ್ರಿಯಾಗುವವರೆಗೂ ಆತಂಕವಿತ್ತು. ಇದೀಗ ಅವರು ಸುರಕ್ಷಿತವಾಗಿ ಮನೆಗೆ ಹಿಂದಿರುಗಿರುವುದರಿಂದ ನಿರಾಳ ಭಾವ ಮೂಡಿದೆ’ ಎಂದರು.
‘ಅಪಹರಣದಿಂದ ಮಾನಸಿಕವಾಗಿ ಜರ್ಜರಿತರಾಗಿರುವ ಅಳಿಯ ಕೃಷ್ಣ ಮತ್ತು ಮಗಳು ಚಂದನಾಗೆ ಆ ಆಘಾತದಿಂದ ಹೊರಬರಲು ಸ್ವಲ್ಪ ಕಾಲಾವಕಾಶ ಬೇಕು. ಕೆಲ ದಿನಗಳ ನಂತರ ಅವರನ್ನು ಬೆಂಗಳೂರಿಗೆ ಬರುವಂತೆ ಆಹ್ವಾನಿಸಲಾಗುತ್ತದೆ ಮುಂದಿನ ವಾರದಲ್ಲಿ ಅವರಿಬ್ಬರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ’ ಎಂದು ವೇಣುಗೋಪಾಲ್ ಹೇಳಿದರು.