ಹಿರಿಯೂರು: ತಾಲ್ಲೂಕಿನ ಉಡುವಳ್ಳಿಯ ನವೋದಯ ವಿದ್ಯಾಲಯದಲ್ಲಿ ಸೋಮವಾರ ರೆಡ್ಕ್ರಾಸ್ ಸಂಸ್ಥೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಂದಾಯ ಇಲಾಖೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ನಡೆಸಲಾಯಿತು.
ಡಿವೈಎಸ್ಪಿ ಡಾ.ಎಚ್.ಸಿ. ಶೇಖರ್ ಮಾತನಾಡಿ, ಮನುಷ್ಯನಿಂದಾಗುವ ವಿಪತ್ತುಗಳು ಮತ್ತು ಪ್ರಕೃತಿಯಲ್ಲಿ ಕಂಡು ಬರುವ ವಿಪತ್ತುಗಳನ್ನು ಎದುರಿಸುವ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದಿರಬೇಕು. ಅಪಘಾತಗಳು ಸಂಭವಿಸಿದಾಗ ಗಾಯಾಳುಗಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡುವುದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿಸುವುದು, ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಮಾಡಬಹುದಾಗಿದೆ.
ಭೂಕಂಪ, ಪ್ರವಾಹ ಮೊದಲಾದ ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆ ಮಾಡಲು ಮುಂದಾಗಬೇಕು. ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜತೆಗೆ ನಮ್ಮ ಜತೆಗಿರುವವರನ್ನು ಉಳಿಸುವ ಯತ್ನ ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಸಂಚಾಲಕ ಡಾ.ಕುಮಾರ್ ಮಾತನಾಡಿ, ಹೆಚ್ಚಿನ ಪ್ರಾಣ ಹಾನಿಯಾಗುವುದು ಅಪಘಾತಗಳಲ್ಲಿ. ಸ್ವಲ್ಪ ಎಚ್ಚರಿಕೆ ವಹಿಸಿದರೂ ಅಪಘಾತಗಳು ಸಂಭವಿಸುವುದನ್ನು ತಡೆಯಲು ಸಾಧ್ಯ. ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳದಿರುವುದು, ವೇಗದ ಚಾಲನೆ-ಕುಡಿದು ಚಾಲನೆ, ಅತಿಯಾದ ವಿಶ್ವಾಸ, ರಸ್ತೆ ನಿಯಮಗಳನ್ನು ಪಾಲನೆ ಮಾಡದಿರುವುದು, ಹದಗೆಟ್ಟ ರಸ್ತೆಗಳು ಅಪಘಾತಗಳಿಗೆ ಪ್ರಮುಖ ಕಾರಣ.
ಅಪಘಾತಗಳು ಸಂಭವಿಸಿದಾಗ ತಕ್ಷಣ ರಕ್ಷಣೆಗೆ ಧಾವಿಸಬೇಕು. ಅಗ್ನಿ ಆಕಸ್ಮಿಕ, ನೀರಿನಲ್ಲಿ ಸಂಭವಿಸುವ ದುರಂತಗಳ ಸಮಯದಲ್ಲಿ ತುಂಬಾ ಎಚ್ಚರಿಕೆ ಇರಬೇಕು ಎಂದು ಅವರು ಸಲಹೆ ಮಾಡಿದರು.
ಚಿತ್ರದುರ್ಗದ ಎಂ. ಮಂಜುನಾಥಗುಪ್ತ, ಉಪ ಪ್ರಾಂಶುಪಾಲ ಬಿ. ರಾಧಾಕೃಷ್ಣನ್, ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್. ಸುಂದರರಾಜ್ ಮಾತನಾಡಿದರು.
ವೈ.ಎಸ್. ಅಶ್ವತ್ಥಕುಮಾರ್, ಬಿ.ಎಸ್. ನವಾಬ್ಸಾಬ್, ಕೆ.ಆರ್. ವೆಂಕಟೇಶ್, ಎ. ಮಂಜುನಾಥ್, ಸೌಭಾಗ್ಯವತಿ ದೇವರು, ಎಂ. ಜಗದೀಶ್, ಶಶಿಕಲಾ ರವಿಶಂಕರ್, ದೇವರಾಜಮೂರ್ತಿ, ಸತೀಶ್ಬಾಬು, ಪರಮೇಶ್ವರಭಟ್, ಗಜೇಂದ್ರಶರ್ಮ, ಎಚ್.ಆರ್. ಅರುಣ್, ವಿಜಯಕುಮಾರ್, ಶರತ್, ಅರುಣ್ಕುಮಾರ್, ಜಯಪ್ರಕಾಶ್ ಉಪಸ್ಥಿತರಿದ್ದರು.