ಬೆಂಗಳೂರು: ಸಾಂಸ್ಥಿಕ ಸ್ವರೂಪ ಸರಳೀಕರಣಗೊಳಿಸಲು ವಿಪ್ರೊ ಸಂಸ್ಥೆಯು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಗಿರೀಶ್ ಪರಾಂಜಪೆ ಮತ್ತು ಸುರೇಶ್ ವಾಸ್ವಾನಿ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿ, ಬದಲಿಗೆ ಟಿ. ಕೆ. ಕುರಿಯನ್ ಅವರನ್ನು ಹೊಸ ‘ಸಿಇಒ’ ಆಗಿ ನೇಮಿಸಿದೆ.
ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ತಳೆದಿರುವ ಈ ನಿರ್ಧಾರ, ಅಲ್ಲಿನ ಹಲವು ಉದ್ಯೋಗಿಗಳನ್ನು ಅಚ್ಚರಿಯಲ್ಲಿ ಕೆಡವಿದೆ. ‘ದಶಕಗಳಿಂದ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದವರನ್ನು ಹೀಗೆ ಏಕಾಏಕಿ ಸೇವೆಯಿಂದ ವಜಾಗೊಳಿಸಿರುವುದು ತೀವ್ರ ಅಚ್ಚರಿ ಮೂಡಿಸಿದೆ’ ಎಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷರೊಬ್ಬರು ಪ್ರತಿಕ್ರಿಯಿಸಿದ್ದಾರೆ.
‘ಜಂಟಿ ‘ಸಿಇಒ’ ಹುದ್ದೆಯಲ್ಲಿದ್ದ ಈ ಇಬ್ಬರೂ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸಂಸ್ಥೆಗೆ ಗಮನಾರ್ಹ ಸೇವೆ ಒದಗಿಸಿದ್ದಾರೆ. ಈಗ ಬದಲಾದ ಪರಿಸ್ಥಿತಿಯಲ್ಲಿ ಸರಳ ಸ್ವರೂಪದ ಆಡಳಿತಾತ್ಮಕ ವ್ಯವಸ್ಥೆಯ ಅಗತ್ಯ ಇದೆ’ ಎಂದಷ್ಟೇ ಈ ವಜಾ ಪ್ರಕ್ರಿಯೆಯ ಕುರಿತು ಪ್ರೇಮ್ಜಿ ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರೂ ಮಾರ್ಚ್ 31ರ ವರೆಗೆ ಸಂಸ್ಥೆಯ ವ್ಯವಹಾರಗಳಲ್ಲಿ ಸಹಾಯ ಮಾಡಲಿದ್ದಾರೆ ಎಂದು ವಿಪ್ರೋ ಪ್ರಕಟಣೆ ತಿಳಿಸಿದೆ.