ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆಗೆ ಹೆಚ್ಚಿನ ಅಧ್ಯಯನ ಅಗತ್ಯ

ಸಾಹಿತಿ ಪ್ರೊ.ಕಮಲಾ ಹಂಪನಾ ಅಭಿಮತ
Last Updated 24 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ವಿದ್ಯಾವಂತ ಮಹಿಳೆ ಯರು ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು' ಎಂದು ಸಾಹಿತಿ ಪ್ರೊ. ಕಮಲಾ ಹಂಪನಾ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘವು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 34ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ದತ್ತಿನಿಧಿ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಮರ್ಶೆ ಬರೆಯಲು ಹೆಚ್ಚಿನ ಅಧ್ಯಯನಗಳಲ್ಲಿ ತೊಡಗಬೇಕು, ಹೆಚ್ಚು ಹೆಚ್ಚು ಓದಬೇಕು. ಅಲ್ಲದೇ, ಒಂದು ಕೃತಿಯನ್ನು ಓದಿದ ನಂತರ ಅದಕ್ಕೆ ಸಂಬಂಧಿಸಿದ ಬೇರೆ ಎಲ್ಲ ಕೃತಿಗಳನ್ನು ಓದಬೇಕು. ಆಗ, ಮಾತ್ರ ವಿಮರ್ಶೆ ಬರೆಯಲು ಸಾಧ್ಯವಾಗುತ್ತದೆ. ವಿಮರ್ಶೆ ಮಾಡುವಂತಹ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಮಹಿಳೆಯರು ಇಂದು ಕಾದಂಬರಿಗಳಲ್ಲಿ ಸ್ತ್ರೀ ಸಂವೇದನೆಯನ್ನು ಮಾತ್ರ ಪ್ರತಿನಿಧಿಸದೆ, ಬೇರೆ ಬೇರೆ ಆಯಾಮ ಗಳು, ಬೇರೆ ಬೇರೆ ವಿಷಯಗಳ ಕುರಿತು ಬೆಳಕು ಚೆಲ್ಲುತ್ತಿದ್ದಾರೆ. ಇದು ಸಂತಸದ ಸಂಗತಿಯಾಗಿದೆ ಎಂದರು.

ಕಾದಂಬರಿ, ಕವನ ಸಂಕಲನಗಳು ಹೆಚ್ಚಾಗಿ ಬರುತ್ತಿವೆ. ಆದರೆ, ಪ್ರವಾಸ ಸಾಹಿತ್ಯಗಳು, ವಿಮರ್ಶೆಗಳು ಮತ್ತು ಸಂಶೋಧನಾ ಸಾಹಿತ್ಯ ನಮ್ಮಲ್ಲಿ ಕಡಿಮೆಯಾಗಿವೆ. ಲೇಖಕಿಯರು ಇದರ ಕಡೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಅವರು ನುಡಿದರು.

ಪುರುಷ ಸಾಹಿತ್ಯ ಮತ್ತು ಮಹಿಳಾ ಸಾಹಿತ್ಯವೆಂದು ಭೇದ ಭಾವ ತೋರದೆ, ಒಟ್ಟು ಕನ್ನಡ ಸಾಹಿತ್ಯವನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಬೇಕು ಎಂದರು.

ಪ್ರಭಾಮೂರ್ತಿ ಅವರ `ಚೀನಾಯಾನ' (ಪ್ರವಾಸ ಕಥನ), ಭಾಷ್ಯಂ ತನುಜೆ ಅವರ `ಸ್ವರ ಹಿಂಡಿದ ಕೈ' (ಕಥಾ ಸಂಕಲನ) ಮತ್ತು ಮಲ್ಲಿಕಾ ಮಳವಳ್ಳಿ ಅವರ ಹೃದಯಗೀತೆ (ಕವನ ಸಂಕಲನ) ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT