ಉಡುಪಿ: ರೋಗಿಗೆ ರಕ್ತದ ಅವಶ್ಯಕತೆ ಇದೆಯೆಂದು ತಿಳಿಸಿದಲ್ಲಿ ಬೇರೆ ಔಷಧಿಗಳಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಶರತ್ ಹೇಳಿದ್ದಾರೆ.
ಅಖಿಲ ಭಾರತ ವಿಮಾ ನೌಕರರ ಸಂಘದ 62ನೇ ಸ್ಥಾಪನಾ ದಿನಾಚರಣೆ ಪ್ರಯುಕ್ತ ಉಡುಪಿ ವಿಭಾಗ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಾಗದೇ ಇರುವುದರಿಂದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಬೇಕಾಗಿದೆ ಎಂದರು.
18ವರ್ಷದಿಂದ 60 ವರ್ಷದ ವರೆಗಿನ ಪುರುಷರು ಪ್ರತೀ ಮೂರು ತಿಂಗಳಿಗೆ ಒಂದು ಬಾರಿ ಮತ್ತು ಮಹಿಳೆಯರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.
ಉಡುಪಿ, ಕಾಪು, ಮಂಗಳೂರು ಸಿ.ಎ.ಬಿ. ಮಂಗಳೂರು, ಮುಲ್ಕಿ, ಬಂಟ್ವಾಳ, ಪುತ್ತೂರು ಮೊದಲಾದ ಶಾಖೆಗಳಿಂದ ಆಗಮಿಸಿದ್ದ ಸಂಘದ ಸದಸ್ಯರು ಮತ್ತು ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ 56 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು..
ಸ್ಥಾಪನಾ ದಿನಾಚರಣೆಗೆ ವಿಮಾನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷರಾದ ಬಿ.ಪ್ರಭಾಕರ್ ಕುಂದರ್ ಅವರು ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಕಾರ್ಯದರ್ಶಿ ಯು,ಗುರುದತ್,ಅದಮಾರು ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು.