ನವದೆಹಲಿ(ಪಿಟಿಐ): ರಾಷ್ಟ್ರೀಯ ಸ್ವಾಸ್ಥ ವಿಮಾ ಯೋಜನೆ (ಆರ್ಎಸ್ಬಿವೈ)ಯ ಅಡಿಯಲ್ಲಿ ಆಟೊ ಮತ್ತು ಟ್ಯಾಕ್ಸಿ ಚಾಲಕರನ್ನು ತರಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಈವರೆಗೆ ಯೋಜನೆಯ ಫಲಾನುಭವಿಗಳಾಗಿದ್ದ ಗೃಹ ಕೈಗಾರಿಕೆ, ಬೀಡಿ ಕಾರ್ಮಿಕರು, ಮೀನುಗಾರರಲ್ಲದೇ ಇವರಿಗೂ ಈ ಸೇವೆ ವಿಸ್ತರಿಸಿದಂತಾಗಿದೆ.
ಅಸಂಘಟಿತ ವಲಯದಲ್ಲಿ ನೂರಾರು ಆಟೊ ಮತ್ತು ಟ್ಯಾಕ್ಸಿ ಚಾಲಕರು ದುಡಿಯುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟವು ಟಿಪ್ಪಣಿ ತಯಾರಿಸುತ್ತಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಗಳು ತಿಳಿಸಿವೆ.
ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರನ್ನೂ ಆರ್ಎಸ್ಬಿವೈ ಯೋಜನೆಯಡಿ ತರುವುದಾಗಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ. ಯೋಜನೆಯಡಿ ಬರುವ ಫಲಾನುಭವಿಗಳಿಗೆ ಆರೋಗ್ಯ ಸಂಬಂಧಿ ರೋಗಗಳ ಆಸ್ಪತ್ರೆ ಖರ್ಚಿಗಾಗಿ ರೂ 30,000 ವರೆಗೆ ನೆರವು ನೀಡಲಾಗುತ್ತದೆ.
ಯೋಜನೆಯ ಅಡಿಯಲ್ಲಿ 4,500 ಖಾಸಗಿ ಮತ್ತು 2,000 ಸರ್ಕಾರಿ ಆಸ್ಪತ್ರೆಗಳನ್ನು ತರಲಾಗಿದೆ.