ತಿರುವನಂತಪುರ : ಇಲ್ಲಿನ ವಿಮಾನನಿಲ್ದಾಣದಲ್ಲಿ ಶುಕ್ರವಾರ ವಿಮಾನವು ಅಪಹರಣಗೊಂಡಿದೆ ಎಂದು ಪೈಲಟ್ ಗುಂಡಿ ಅದುಮಿದ ಕಾರಣ ನಿಲ್ದಾಣದ ಭದ್ರತಾ ಸಿಬ್ಬಂದಿಯಲ್ಲಿ ಕ್ಷಣಕಾಲ ಆಂತಕದ ವಾತಾವರಣ ನಿರ್ಮಾಣವಾಗಿತ್ತು.
ಅಬುದುಬೈ-ಕೊಚ್ಚಿಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನವು ಪ್ರತಿಕೂಲ ಹವಾಮಾನದ ಕಾರಣ ತಿರುವನಂತಪುರಕ್ಕೆ ಪಥ ಬದಲಿಸಿತು. ಇದರಿಂದ ಸಿಟ್ಟೆಗೆದ್ದ ಪ್ರಯಾಣಿಕರು ಪೈಲಟ್ ಕೂರುವ ಕಾಕ್ಪಿಟ್ ಸ್ಥಳಕ್ಕೆ ನುಗ್ಗಿ ಗಲಾಟೆ ಆರಂಭಿಸಿದ್ದರಿಂದ ವಿಚಲಿತಗೊಂಡ ಪೈಲಟ್ ಹೈಜಾಕ್ ಗುಂಡಿಯನ್ನು ಅದುಮಿದ.
ಇದರಿಂದ ಆತಂಕಿತಗೊಂಡ ಭದ್ರತಾ ಸಿಬ್ಬಂದಿ ವಿಮಾನದ ಸುತ್ತ ಶಸ್ತ್ರಸಜ್ಜಿತರಾಗಿ ಸುತ್ತುವರೆದರೆಂದು ಮೂಲಗಳು ತಿಳಿಸಿವೆ.
ಅಬುದುಬೈನಿಂದ ಹೊರಟ ಈ ವಿಮಾನವು ಮುಂಜಾನೆ 3.30ಕ್ಕೆ ಕೊಚ್ಚಿಯಲ್ಲಿ ಇಳಿಯಬೇಕಾಗಿತ್ತು. ಆದರೆ ದಟ್ಟ ಮಂಜಿನ ಕಾರಣ ಮುಂಜಾನೆ 6.30 ಕ್ಕೆ ತಿರುವನಂತಪುರದಲ್ಲಿ ಇಳಿಸಲಾಯಿತು. ವಿಮಾನದ ಸಿಬ್ಬಂದಿ ವಿಮಾನಕ್ಕೆ ಇಂಧನ ತುಂಬಿಸಲೆಂದು ಇಳಿಸಲಾಗಿದೆ ಎಂದು ತಿಳಿಸಿದರು. ಹೀಗಾಗಿ ಪ್ರಯಾಣಿಕರು ಸುಮಾರು 4 ಗಂಟೆಗಳ ಕಾಲ ವಿಮಾನದಲ್ಲಿಯೇ ಕೂರಬೇಕಾಯಿತು ನಂತರ ಪೈಲಟ್ ಹಾಗೂ ಸಿಬ್ಬಂದಿ ತಮ್ಮ ಕೆಲಸದ ಅವಧಿ ಮುಕ್ತಾಯವಾಯಿತೆಂದು ತೆರಳಲು ಅನುವಾದರು ಹೀಗಾಗಿ ಗಂಟೆಗಟ್ಟಲೆ ಕಾದು ಕುಳಿತ ಪ್ರಯಾಣಿಕರು ಪೈಲಟ್ ಜತೆಗೆ ಮಾತುಕತೆಗೆ ಮುಂದಾದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ತದನಂತರ ವಿಮಾನಕ್ಕೆ ಬೇರೊಬ್ಬ ಪೈಲಟ್ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಘಟನೆ ಬಗೆಗೆ ತನಿಖೆಗೆ ಆದೇಶಿಸಲಾಗಿದೆ.