ಬೆಂಗಳೂರು: `ದೇವನಹಳ್ಳಿ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು~ ಎಂದು ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಷಿ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ. ಅವರ ಬಗೆಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ದೇವನಹಳ್ಳಿ ಟಿಪ್ಪು ಹುಟ್ಟಿದ ಸ್ಥಾನ. ಅದಕ್ಕೆ ಅವರ ಹೆಸರಿಡುವುದು ಸೂಕ್ತ~ ಎಂದು ಅವರು ಹೇಳಿದರು.
`ಅಲ್ಪಸಂಖ್ಯಾತರಿಗೆ ಎಲ್ಲದರಲ್ಲೂ ಅನ್ಯಾಯವಾಗುತ್ತಿದೆ. ಇದರಿಂದ ಚರ್ಚೆ ನಡೆಸಲು ರಾಜ್ಯಸಭಾ ಸದಸ್ಯ ಸೀತಾರಾಂ ಯಚೂರಿ ಅವರೊಂದಿಗೆ ಜ.7 ರಂದು ಇನ್ಫೆಂಟ್ರಿ ಸಭಾಂಗಣದಲ್ಲಿ ಬಹಿರಂಗ ಸಭೆ ಏರ್ಪಡಿಸಿದ್ದೇವೆ~ ಎಂದು ಹೇಳಿದರು.
`ಸಭೆಯಲ್ಲಿ ಲಾಲ್ಬಾಗ್ ಇತಿಹಾಸದ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಅಲ್ಪಸಂಖ್ಯಾತರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚಿಸಲಾಗುವುದು. ಮುಸ್ಲಿಂರಿಗೆ ಪ್ರತ್ಯೇಕ ಮೀಸಲಾತಿ ನೀಡುವುದರ ಬಗೆಗೆ ಒತ್ತಾಯಿಸಲಾಗುವುದು~ ಎಂದರು.
ಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಟಿ.ನರಸಿಂಹಮೂರ್ತಿ, ಸಂಚಾಲಕ ಮಾವಳ್ಳಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.