ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಗಳಿಗೂ ‘ಸ್ವಚ್ಛ ಭಾರತ ಅಭಿಯಾನ’!

ವಿಜ್ಞಾನ ಲೋಕದಿಂದ
Last Updated 3 ಜುಲೈ 2016, 20:26 IST
ಅಕ್ಷರ ಗಾತ್ರ

ತ್ಯಾಜ್ಯ ವಿಲೇವಾರಿಗೆ ಅನಿಲೀಕರಣ ಘಟಕವೊಂದನ್ನು ವಿಮಾನದಲ್ಲೇ ಅಳವಡಿಸಿ, ಘನತ್ಯಾಜ್ಯವನ್ನು ಈ ಘಟಕದೊಳಗೆ  ಕೊಳೆಯುವಂತೆ ಮಾಡಲಾಗುವುದು...

ನಮ್ಮ ನಗರಗಳಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ ನಿರ್ವಹಣೆಗೆ ‘ಸ್ವಚ್ಛ ಭಾರತ’ ಅಭಿಯಾನದ ನವೀಕೃತ ಪ್ರಯತ್ನ ಉತ್ತೇಜನಕಾರಿಯಾಗಿರುವುದು ನಮಗೆಲ್ಲ ತಿಳಿದಿದೆ. ಆದರೆ, ಇದು ನೆಲದ ಮೇಲೆ ಉತ್ಪತ್ತಿಯಾಗುವ ಘನತ್ಯಾಜ್ಯಕ್ಕೆ ಸೀಮಿತವಾಗಿದೆ. ಹಾಗಾದರೆ ಆಕಾಶದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯದ ಸ್ಥಿತಿಯೇನು?

ಭಾರತಿಯ ವಿಜ್ಞಾನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಮೋಹಿತ್ ಗುಪ್ತ ಮತ್ತು ದರ್ಶನ್ ಶೇಷಗಿರಿ ಅವರು ಈ ಪ್ರಶ್ನೆಗೆ ಉತ್ತರ ಸೂಚಿಸಿದ್ದಾರೆ.  ಸದ್ಯ ಅಮೆರಿಕದ ಜಾರ್ಜಿಯ ಟೆಕ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಅವರಿಗೆ, ಈ ಹೊಸ ಅನ್ವೇಷಣೆಗಾಗಿ ಪ್ರತಿಷ್ಠಿತ ‘ಇನೋವೇಷನ್ ಶೋ ಡೌನ್ 2016’ ಪ್ರಶಸ್ತಿ ಸಿಕ್ಕಿದೆ.

‘ಇನೋವೇಷನ್ ಶೋ ಡೌನ್’ ಎಂಬುದು ಅಮೆರಿಕವು ಅನೇಕ ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಹೆಸರಾಂತ ಸ್ಪರ್ಧೆ. ಇದರಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿನ ಮುನ್ನೂರಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತವೆ.

ಇವುಗಳಲ್ಲಿ ತಾಂತ್ರಿಕ ಕಲ್ಪನೆ ಮತ್ತು ಔದ್ಯಮಿಕ ಸಂಭಾವ್ಯವನ್ನು ಆಧರಿಸಿ ಕೇವಲ ಐದು ತಂಡಗಳನ್ನು ಅಂತಿಮ ಘಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ‘ಏರ್‌ಬಸ್’ ಮತ್ತು ‘ಡೆಲ್ಟಾ’ ಸಂಸ್ಥೆಯವರು ತೀರ್ಪುಗಾರರಾಗಿ ಕುಳಿತಿರುತ್ತಾರೆ. ಅಂತಿಮ ಘಟ್ಟದ ಮೂರು ಸುತ್ತಿನಲ್ಲಿ ಅನ್ವೇಷಣೆ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಮತ್ತು ಅದರ ಕಾರ್ಯಸಾಧ್ಯತೆ ಕುರಿತು ವಿಶ್ಲೇಷಿಸಲಾಗುತ್ತದೆ. ​

‘ವಿಮಾನಯಾನ ಉದ್ಯಮದಲ್ಲಿ ತ್ಯಾಜ್ಯ ನಿರ್ವಹಣೆ ಕಡೆಗಣಿಸಲ್ಪಟ್ಟ ವಿಷಯವಾಗಿದೆ. 2010ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾದ ಲೇಖನವೊಂದರ ಪ್ರಕಾರ, ವಿಮಾನಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವೆಲ್ಲ ನೇರವಾಗಿ ನೆಲದಲ್ಲಿ ಹೂತಿಡುವ (Landfill) ಸ್ಥಳಕ್ಕೆ ಕಳುಹಿಸಲಾಗುತ್ತಿದೆ.

ಇದಕ್ಕೆಂದೇ ಪ್ರತಿ ಟನ್ನಿಗೆ ಸುಮಾರು 231 ಡಾಲರ್‌ನಷ್ಟು ಖರ್ಚು ಮಾಡುವುದಲ್ಲದೆ, ಪ್ರತಿ ಟನ್ನಿಗೆ ಸುಮಾರು 16 ಡಾಲರ್‌ನಷ್ಟು ಟಿಪ್ಪಿಂಗ್ ಶುಲ್ಕ ಪಾವತಿಸುತ್ತಿದ್ದಾರೆ. ಒಂದು ಟನ್ ತ್ಯಾಜ್ಯವು ಸುಮಾರು ಮೂರು ಬಹುದೂರ ವಿಮಾನಯಾನದಿಂದ ಉತ್ಪತ್ತಿಯಾಗುತ್ತದೆ’ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ದಿನೇಶ್ ಕುಮಾರ್ ಹರೂರ್ ಸಂಪತ್.

ದಿನೇಶ್ ಅವರು ವಿಜಯಿ ತಂಡದ ಮಾರ್ಗದರ್ಶಕರಾಗಿದ್ದರು. ‘ವಿಜಯಿ ತಂಡದ ಇಬ್ಬರು ನಮ್ಮ ಲ್ಯಾಬ್‌ನ ಹಳೆಯ ವಿದ್ಯಾರ್ಥಿಗಳು’ ಎಂದು ಅವರು ಹೆಮ್ಮೆಯಿಂದ ಹೇಳಿದರು. 

‘ನಾವು ನಮ್ಮ ಮನಸ್ಸನ್ನು, ನಮ್ಮ ಚಿಂತನೆಯನ್ನು ಹೊಸತನಕ್ಕೆ ಬದಲಾಯಿಸಿದ್ದೇವೆ. ಅದು  ಇನೋವೇಷನ್ ಆಗಿ ಹೊರ ಹೊಮ್ಮಿದೆ’ ಎನ್ನುತ್ತಾರೆ ವಿದ್ಯಾರ್ಥಿ ತಂಡದ ನಾಯಕ, ಮೋಹಿತ್ ಗುಪ್ತ.

ಮತ್ತೊಬ್ಬ ವಿದ್ಯಾರ್ಥಿ ದರ್ಶನ್ ಶೇಷಗಿರಿ, ‘ನಮ್ಮ ತಂಡದ ಗೆಲುವಿನ ಶ್ರೇಯಸ್ಸು, ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಲ್ಯಾಬ್‌ಗೆ ಸಲ್ಲಬೇಕು. ಆರೋಹಿ ಷಾ ಅವರ ತಾಂತ್ರಿಕ ಕೌಶಲಗಳ ಜೊತೆಗೆ ಪತ್ರಿಕೋದ್ಯಮ ವಿಷಯದಲ್ಲಿ ಪಡೆದ ಅನುಭವವೂ  ಪ್ರಾತ್ಯಕ್ಷಿಕೆ ರೂಪಿಸಲು ನೆರವಾಯಿತು’ ಎಂದಿದ್ದಾರೆ. 

ವಿದ್ಯಾರ್ಥಿಗಳ ಕಲ್ಪನೆ ತ್ಯಾಜ್ಯ ಅನಿಲೀಕರಣದಲ್ಲಿ ಸುಸ್ಥಾಪಿತ ವಿಧಾನವನ್ನು ಅವಲಂಬಿಸುತ್ತದೆ. ಇದರಿಂದ ತ್ಯಾಜ್ಯವನ್ನು ಸಣ್ಣ ಭಾಗಗಳಾಗಿಸಿ, ಇದನ್ನು ಸಾಗಿಸುವ ಮತ್ತು ವಿಲೇವಾರಿ ಮಾಡುವುದರಲ್ಲಿ ಸರಾಗವಾಗುತ್ತದೆ.

ಇವರು ಪ್ರಸ್ತಾಪಿಸಿರುವ ವಿಧಾನದಂತೆ ಈ ತ್ಯಾಜ್ಯ ಅನಿಲೀಕರಣ ಘಟಕವೊಂದನ್ನು ವಿಮಾನದಲ್ಲೇ ಅಳವಡಿಸಬೇಕಾಗುತ್ತದೆ. ವಿಮಾನದಲ್ಲಿ ಉತ್ಪತ್ತಿಯಾದ ಎಲ್ಲ ಘನತ್ಯಾಜ್ಯವನ್ನು ಸಂಗ್ರಹಿಸಿ ಈ ಘಟಕದೊಳಗೆ  ಸೇರಿಸಲಾಗುತ್ತದೆ. ಇದರೊಳಗೆ ತ್ಯಾಜ್ಯವೆಲ್ಲ ಕೊಳೆಯುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ.

ಈ ಸಂದರ್ಭದಲ್ಲಿ ಹೊರಬರುವ ದಹಿಸಬಹುದಾದ ಅನಿಲಗಳನ್ನೆಲ್ಲಾ ಒಂದು ಫಿಲ್ಟರ್ ಮೂಲಕ ಸೋಸಿ ಅದನ್ನು ಒಂದು ಚೇಂಬರ್ ಒಳಗೆ ಸುಡಲಾಗುತ್ತದೆ. ಇದರಿಂದ ಹೊರಬರುವ ಅನಿಲಗಳನ್ನು ಆಕಾಶದಲ್ಲೇ ಹೊರ ಹಾಕಲಾಗುತ್ತದೆ. ವಿಮಾನಗಳು ಹಾರಾಡುವ ಎತ್ತರದಲ್ಲಿ ಗಾಳಿಯ ಒತ್ತಡ ತೀರಾ ಕಡಿಮೆಯಿರುವುದರಿಂದ ಅನಿಲ ತಾನಾಗಿಯೇ ಹೊರನುಗ್ಗಿ ಹೋಗುತ್ತದೆ. 

ಈ ತಂಡದವರು ಹೊಸ ವಿಧಾನ ರೂಪಿಸುವಾಗ ಚರ್ಚೆಯಲ್ಲಿ ನಮ್ಮ  ಪಚನ ವ್ಯವಸ್ಥೆಗೆ ಹೋಲಿಸಿದ್ದಾರೆ. ಇಲ್ಲಿ ನಮ್ಮ ಕರುಳು ನಾವು ಸೇವಿಸುವ ಆಹಾರವನ್ನು ಸಮೀಕರಿಸಿ ಶಕ್ತಿಯನ್ನು ಒಂದೆಡೆ ಪಡೆದರೆ, ಇನ್ನೊಂದೆಡೆ ತ್ಯಾಜ್ಯವನ್ನು ಘನ ಮತ್ತು ಅನಿಲ ರೂಪದಲ್ಲಿ ಹೊರಹಾಕುತ್ತದೆ.

‘ವಿಮಾನದಲ್ಲಿ ಉತ್ಪತ್ತಿಯಾಗುವ ಸಾವಯವ ತ್ಯಾಜ್ಯವನ್ನು ವಿಮಾನದಲ್ಲಿನ ತ್ಯಾಜ್ಯ ಅನಿಲೀಕರಣ ಘಟಕಕ್ಕೆ ಕಳುಹಿಸಿ ಅಲ್ಲಿಂದ ಇಂಧನವನ್ನು ಪಡೆಯ
ಬಹುದು. ಇದರಿಂದ ಆರ್ಥಿಕ ಉಳಿತಾಯದೊಡನೆ ವಾಯುಯಾನದಿಂದ ಪರಿಸರಕ್ಕೆ ಉಂಟಾಗುವ ಹಾನಿಯು ಕಡಿಮೆಯಾಗುತ್ತದೆ’ ಎನ್ನುತ್ತಾರೆ ತಂಡದವರು.
- ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT